ಢಾಕಾ: ಬಾಂಗ್ಲಾದೇಶಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸವು ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ನಿಗದಿ ಮಾಡಿದ್ದ 14 ದಿನಗಳ ಪ್ರತ್ಯೇಕವಾಸಕ್ಕೆ ಉಭಯ ದೇಶಗಳ ಮಂಡಳಿಗಳು ಒಪ್ಪದ ಕಾರಣ ಈ ತೀರ್ಮಾನ ತೆಗದುಕೊಳ್ಳಲಾಗಿದೆ.
ಬಾಂಗ್ಲಾದೇಶ ತಂಡವು ಈ ಮೊದಲು ಜುಲೈ–ಆಗಸ್ಟ್ನಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಬೇಕಿತ್ತು. ಇದು ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.
ಸದ್ಯದ ವೇಳಾಪಟ್ಟಿಯ ಪ್ರಕಾರ ಇದೇ 27ರಂದು ಬಾಂಗ್ಲಾ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿತ್ತು. ಅಕ್ಟೋಬರ್ 23ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಬೇಕಿತ್ತು. ಶ್ರೀಲಂಕಾಕ್ಕೆ ತಲುಪಿದ ಬಳಿಕ ಬಾಂಗ್ಲಾ ಆಟಗಾರರು 14 ದಿನಗಳ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಲಂಕಾ ಅಧಿಕಾರಿಗಳು ಸೂಚಿಸಿದ್ದರು. ಇದಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ) ಒಪ್ಪಿಲ್ಲ.
ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಅವರು ಪ್ರತ್ಯೇಕವಾಸದ ಅವಧಿಯನ್ನು ಕಡಿತಗೊಳಿಸುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು (ಎಸ್ಎಲ್ಸಿ) ಕೋರಿದ್ದರು. ಅವಧಿ ಕಡಿತಗೊಳಿಸದಿದ್ದರೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದೂ ಅವರು ಹೇಳಿದ್ದರು. ಈ ಕುರಿತು ಉಭಯ ಮಂಡಳಿಗಳು ಮಾತುಕತೆ ನಡೆಸಿದ್ದವು. ಆದರೆ ಮಂಡಳಿಗಳ ನಡುವೆ ಹೊಂದಾಣಿಕೆ ಕಂಡುಬಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.