ಮುಂಬೈ: ಕೇಂದ್ರ ಗುತ್ತಿಗೆ ನಿಯಮದಂತೆ ಆಟಗಾರರಿಗೆ ನೀಡಬೇಕಿದ್ದ ತ್ರೈಮಾಸಿಕ ಬಾಕಿ ಮೊತ್ತವನ್ನು ಪಾವತಿಸಿರುವ ಬಿಸಿಸಿಐ, ಕೋವಿಡ್–19 ನಿಂದ ಉಂಟಾಗಿರುವ ಸಂಕಷ್ಟದ ಸನ್ನಿವೇಶದಲ್ಲಿ ಯಾವ ಆಟಗಾರನಿಗೂ ತೊಂದರೆಯಾಗಲೂ ಬಿಡುವುದಿಲ್ಲ ಎಂದು ತಿಳಿಸಿದೆ.
‘ಮಾರ್ಚ್ 24ರಿಂದ ಏಪ್ರಿಲ್ 14ರ ವರೆಗೆ ಲಾಕ್ಡೌನ್ ಘೋಷಣೆಯಾಗಿದೆ. ಈಗಾಗಲೇ ಎಲ್ಲಾ ಪಂದ್ಯಾವಳಿಗಳನ್ನುನಿಲ್ಲಿಸಿರುವ ಬಿಸಿಸಿಐ, ಅದರ ಹೊರತಾಗಿಯೂ ಯಾವುದೇ ರೀತಿಯ ಸಂಭಾವ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ.ಕೇಂದ್ರ ಗುತ್ತಿಗೆ ನಿಯಮದಂತೆ ಆಟಗಾರರಿಗೆ ನೀಡಬೇಕಿರುವ ತ್ರೈಮಾಸಿಕ ಕಂತಿನ ಹಣವನ್ನು ಪಾವತಿಸುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರುತಿಳಿಸಿದ್ದಾರೆ.
‘ಭಾರತ ಮತ್ತು ಭಾರತ ‘ಎ’ ತಂಡಗಳ ಪರ ಆಡಿರುವಎಲ್ಲರಿಗೂ ಪಂದ್ಯದ ಸಂಭಾವನೆಯನ್ನು ಈ ಹಣಕಾಸು ವರ್ಷದ ಕೊನೆಯಲ್ಲಿ ಪಾವತಿಸಲಾಗಿದೆ’ ಎಂದಿದ್ದಾರೆ.
‘ಕೆಲ ಕ್ರಿಕೆಟ್ ಮಂಡಳಿಗಳು ಆಟಗಾರರನ್ನು ಸರ್ಕಾರದ ನೆರವು ಯೋಜನೆಗೆ ಸೇರಿಸಿವೆ. ಎಲ್ಲೆಡೆ ವೇತನ ಕಡಿತದ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ, ಬಿಸಿಸಿಐ ತನ್ನ ಆಟಗಾರರನ್ನು ಚೆನ್ನಾಗಿ ನೋಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ನನ್ನ ನಂಬಿಕೆ’ ಎಂದೂ ಹೇಳಿದ್ದಾರೆ.
ಇದುವರೆಗೆ ಸುಮಾರು 95 ಸಾವಿರ ಜನರನ್ನು ಬಲಿಪಡೆದಿರುವ ಕೋವಿಡ್–19 ನಿಂದಾಗಿ ಜಾಗತಿಕ ಆರ್ಥಿಕತೆಗೆ ತೀವ್ರ ಹಿನ್ನಡೆ ಉಂಟಾಗಿದೆ. ಹೀಗಾಗಿ ಪ್ರಮುಖ ಕ್ರಿಕೆಟ್ ಮಂಡಳಿಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಆಟಗಾರರಿಗೆ ವೇತನ ಕಡಿತಗೊಳಿಸುವ ಸೂಚನೆ ನೀಡಿವೆ. ಇದರ ನಡುವೆ ಬಿಸಿಸಿಐ ಕೈಗೊಂಡಿರುವ ಕ್ರಮ ಪ್ರಶಂಸನೀಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.