ADVERTISEMENT

’ಕಾಫಿ’ ಕಾರ್ಯಕ್ರಮದಲ್ಲಿ ಪಾಂಡ್ಯ ಹರಿಬಿಟ್ಟ ಮಾತು;ಬಿಸಿಸಿಐನಿಂದ ಶೋಕಾಸ್‌ ನೋಟಿಸ್‌

ಏಜೆನ್ಸೀಸ್
Published 9 ಜನವರಿ 2019, 15:35 IST
Last Updated 9 ಜನವರಿ 2019, 15:35 IST
   

ನವದೆಹಲಿ: ’ಕಾಫಿ ವಿತ್‌ ಕರಣ್‌’ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಭಾರತ ಕ್ರಿಕೆಟ್‌ ತಂಡದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್‌ಗೆ ಬುಧವಾರ ಬಿಸಿಸಿಐ ಶೋಕಾಸ್ ನೋಟಿಸ್ ನೀಡಿದೆ.

ಈ ಕ್ರಿಕೆಟಿಗರ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಹೇಳಿಕೆ ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಹಾರ್ದಿಕ್‌ ಪಾಂಡ್ಯ ಕ್ಷಮೆಯಾಚಿಸಿದ್ದರು. ಆಟಗಾರರ ಹೇಳಿಕೆಗಳಿಂದ ಸಿಡಿಮಿಡಿಗೊಂಡಿರುವ ಬಿಸಿಸಿಐ, ಇಂಥ ಟಿವಿಶೋಗಳಲ್ಲಿ ಭಾಗವಹಿಸಲು ಆಟಗಾರರ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ.

'ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌ ರಾಹುಲ್‌ ಅವರಿಗೆ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಶೋಕಾಸ್‌ ನೋಟಿಸ್‌ ನೀಡಿದ್ದೇವೆ. ನೋಟಿಸ್ ಕೈಸೇರಿದ 24 ಗಂಟೆಯೊಳಗೆ ಉತ್ತರಿಸುವಂತೆ ತಾಕೀತು ಮಾಡಲಾಗಿದೆ' ಎಂದು ಕ್ರಿಕೆಟ್‌ ಆಡಳಿತ ಸಮಿತಿ ಅಧ್ಯಕ್ಷ ವಿನೋದ್‌ ರೈ ಹೇಳಿದ್ದಾರೆ.

ADVERTISEMENT

ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್ ನಡೆಸಿಕೊಡುವ ’ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಪಾಂಡ್ಯ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ’ಕಾರ್ಯಕ್ರಮದ ಓಘದೊಂದಿಗೆ ಸಾಗಿದೆ. ನಿಜಕ್ಕೂ ಯಾರಿಗೂ, ಯಾರ ಭಾವನೆಗಳಿಗೂ ನೋವುಂಟು ಮಾಡುವ ಇರಾದೆ ಇರಲಿಲ್ಲ. ಇದರಿಂದಾಗಿ ನೋವಾಗಿರುವ ಎಲ್ಲರಲ್ಲಿಯೂ ನಾನು ಕ್ಷಮೆಯಾಚಿಸುತ್ತೇನೆ’ ಎಂದು ಪಾಂಡ್ಯ ಹೇಳಿಕೊಂಡಿದ್ದಾರೆ.

ಒಬ್ಬರಿಗಿಂತ ಹೆಚ್ಚು ಮಹಿಳೆಯರ ಸಂಗಡ ಇರುವುದು ಹಾಗೂ ಆ ಬಗ್ಗೆ ತನ್ನ ಪಾಲಕರ ಬಳಿ ಬಿಚ್ಚು ಮನಸ್ಸಿನಿಂದ ಮಾತನಾಡುವುದಾಗಿ ಕಾರ್ಯಕ್ರಮದಲ್ಲಿ‍ಪಾಂಡ್ಯ ಹೇಳಿಕೊಂಡಿದ್ದರು. ಕ್ಲಬ್‌ನಲ್ಲಿ ಮಹಿಳೆಯ ಹೆಸರನ್ನು ಏಕೆ ಕೇಳುವುದಿಲ್ಲ ಎಂಬ ಪ್ರಶ್ನೆಗೆ, ’ಅವರು ಹೇಗೆಲ್ಲ ನಡೆದುಕೊಳ್ಳುತ್ತಾರೆ ಎಂಬುದನ್ನು ನೋಡಲು, ಗಮನಿಸಲು ನನಗಿಷ್ಟ...’ ಎಂದಿದ್ದರು.

ಈ ಕಾರ್ಯಕ್ರಮ ಪ್ರಸಾರವಾದ ಬಳಿಕ ಸಾಕಷ್ಟು ಪಾಂಡ್ಯ ಮತ್ತು ರಾಹುಲ್‌ ಸಾಕಷ್ಟು ಟೀಕೆಗೆ ಒಳಗಾಗಿದ್ದು, ಇದರಿಂದ ಬಿಸಿಸಿಐ ಕೂಡ ಮುಜುಗರಕ್ಕೀಡಾಗಿದೆ. ಕ್ರಿಕೆಟ್‌ನ ಹೊರತಾದ ಕಾರ್ಯಕ್ರಮಗಳಲ್ಲಿ ಮುಂದೆ ಆಟಗಾರರು ಕಾಣಿಸಿಕೊಳ್ಳುವ ಬಗ್ಗೆ ಬಿಸಿಸಿಐ ನಿರ್ಬಂಧ ಹೇರುವ ಚಿಂತನೆಯಲ್ಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೆನ್ನು ನೋವಿನಸಮಸ್ಯೆಯಿಂದ ಬಳಲುತ್ತಿದ್ದ ಪಾಂಡ್ಯ ಮೆಲ್ಬೋರ್ನ್‌ನಲ್ಲಿ ನಡೆದ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡದೊಂದಿಗಿದ್ದರು. ಸಿಡ್ನಿಯಲ್ಲಿ ಜನವರಿ 12ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಂದುವರಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.