ಬೆಂಗಳೂರು: ನಾಯಕಿ ಚಾಂದಸಿ ಕೃಷ್ಣಮೂರ್ತಿ (28ಕ್ಕೆ 3), ಮಿಥಿಲಾ ವಿನೋದ್ (18ಕ್ಕೆ 3) ಅವರ ಬೌಲಿಂಗ್ ಹಾಗೂ ರೋಶಿನಿ ಕಿರಣ್ (ಔಟಾಗದೆ 81) ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ಕರ್ನಾಟಕ 19 ವರ್ಷದೊಳಗಿನ ಮಹಿಳಾ ತಂಡದವರು ಬಿಸಿಸಿಐ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ಜೈಪುರದ ಆರ್ಸಿಎ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕರ್ನಾಟಕ ಮಹಿಳೆಯರು ಎಂಟು ವಿಕೆಟ್ಗಳಿಂದ ದೆಹಲಿ ತಂಡವನ್ನು ಮಣಿಸಿದರು. ಮೊದಲ ಬ್ಯಾಟಿಂಗ್ ಮಾಡಿದ ದೆಹಲಿ 46.1 ಓವರ್ಗಳಲ್ಲಿ 134 ರನ್ ಗಳಿಸಿ ಎಲ್ಲ ವಿಕೆಟ್ ಒಪ್ಪಿಸಿತು. ಚಾಂದಸಿ, ಮಿಥಿಲಾ ಅಲ್ಲದೆ ರೀಮಾ ಫರೀದ್ (33ಕ್ಕೆ 2) ಕೂಡ ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ದೆಹಲಿ ಪರ ಕೃತಿಕಾ ಗಾಗ್ದಾ (35) ಗರಿಷ್ಠ ರನ್ ದಾಖಲಿಸಿದರು. ಸಾಧಾರಣ ಗುರಿ ಬೆನ್ನತ್ತಿದ ರಾಜ್ಯ ತಂಡದವರು 39.2 ಓವರ್ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಜಯ ಸಾಧಿಸಿದರು. ರೋಶಿನಿ ಹಾಗೂ ರಕ್ಷಿತಾ ನಾಯಕ್ (29) ಗೆಲುವು ಸುಲಭಗೊಳಿಸಿದರು.
ಕರ್ನಾಟಕ ಮಹಿಳೆಯರು ಇದೇ 16ರಂದು ನಡೆಯುವ ಸೆಮಿಫೈನಲ್ನಲ್ಲಿ ಮಧ್ಯಪ್ರದೇಶ ಅಥವಾ ಮುಂಬೈ ತಂಡವನ್ನು ಎದುರಿಸಲಿದ್ದಾರೆ.
ಪುರುಷರ ತಂಡಕ್ಕೆ ಸೋಲು: ವಿನೂ ಮಂಕಡ್ ಟ್ರೋಫಿಗಾಗಿ ನಡೆದ 19 ವರ್ಷದೊಳಗಿನ ಪುರುಷರ ಏಕದಿನ ಟ್ರೋಫಿ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕ ತಂಡವು 70 ರನ್ಗಳಿಂದ ಮಹಾರಾಷ್ಟ್ರಕ್ಕೆ ಮಣಿಯಿತು.
ಅಹಮದಾಬಾದ್ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಮಹಾರಾಷ್ಟ್ರ 48.3 ಓವರ್ಗಳಲ್ಲಿ 185 ರನ್ ಕಲೆಹಾಕಿತು. ಕರ್ನಾಟಕ ತಂಡದವರು 37.1 ಓವರ್ಗಳಲ್ಲಿ 115 ರನ್ ಗಳಿಸಿ ಎಲ್ಲ ವಿಕೆಟ್ ಒಪ್ಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.