ADVERTISEMENT

ಬಿಡಿಕೆ ಕೋಲ್ಟ್ಸ್‌ ಚಾಂಪಿಯನ್‌

‘ಲೀಲಾವತಿ ಪ್ಯಾಲೇಸ್‌ ಕಪ್‌’ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 5:48 IST
Last Updated 9 ನವೆಂಬರ್ 2020, 5:48 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ 14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಬಿಡಿಕೆ ಕೋಲ್ಟ್ಸ್‌ ತಂಡದವರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ 14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಬಿಡಿಕೆ ಕೋಲ್ಟ್ಸ್‌ ತಂಡದವರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಮಿಂಚಿದ ಬಿಡಿಕೆ ಕೋಲ್ಟ್ಸ್‌ ತಂಡ14 ವರ್ಷದ ಒಳಗಿನವರ ‘ಲೀಲಾವತಿ ಪ್ಯಾಲೇಸ್‌ ಕಪ್‌’ ಅಂತರ ಕ್ಯಾಂಪ್‌ಗಳ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು.

ಚಾಂಪಿಯನ್ಸ್‌ ನೆಟ್‌ ಕ್ರಿಕೆಟ್‌ ತರಬೇತಿ ಕೇಂದ್ರ ಆಯೋಜಿಸಿದ್ದ ಟೂರ್ನಿಯ ಫೈನಲ್ ಪಂದ್ಯ ನಗರದ ಹುಬ್ಬಳ್ಳಿ ಸ್ಪೋರ್ಟ್ಸ್‌ ಮೈದಾನದಲ್ಲಿ (ಜಿಮ್ಖಾನಾ)ನಡೆಯಿತು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಬಿಡಿಕೆ 30 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿತು. ಈ ಗುರಿಯ ಎದುರು ಪರದಾಡಿದ ಧಾರವಾಡದ ಫಸ್ಟ್‌ ಕ್ರಿಕೆಟ್ ಅಕಾಡೆಮಿ (ಎಫ್‌ಸಿಎ) 20.4 ಓವರ್‌ಗಳಲ್ಲಿ 50 ರನ್ ಗಳಿಸಿ ತನ್ನ ಹೋರಾಟ ಮುಗಿಸಿ ರನ್ನರ್ಸ್ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಬಿಡಿಕೆ ತಂಡದ ಬಿ. ಮಣಿಕಂಠ 70, ಪಿ. ವಿನಾಯಕ 27, ರೋಹಿತ ವೈ. 23 ರನ್‌ ಗಳಿಸಿದರು. ಇದೇ ತಂಡದ ಭುವನ ಬಿ. ಮತ್ತು ಸೌರಭ್‌ ಜಿ. ತಲಾ ಎರಡು ವಿಕೆಟ್‌ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಚಾಂಪಿಯನ್‌ ತಂಡಕ್ಕೆಬಾಬಾ ಭೂಸದ,ಜಯರಾಜ ನೂಲ್ವಿ,ಭೀಮರಾವ ಜೋಶಿ ಮತ್ತು ಶಿವಾನಂದ ಗುಂಜಾಳ ಮಾರ್ಗದರ್ಶನ ಮಾಡಿದ್ದರು.

ADVERTISEMENT

ಚಾಲನೆ: ಫೈನಲ್‌ ಪಂದ್ಯಕ್ಕೆ ವೈಭವ್‌ ಗ್ರೂಪ್‌ ಆಫ್‌ ಇಂಡಸ್ಟ್ರಿಯ ನಿರ್ದೇಶನ ಎಚ್‌.ಎನ್‌. ನಂದಕುಮಾರ ಅವರು ಚಾಲನೆ ನೀಡಿ ಎರಡೂ ತಂಡಗಳ ಆಟಗಾರರಿಗೆ ಶುಭ ಹಾರೈಸಿದರು.

ಕೆಎಸ್‌ಸಿಎ ಧಾರವಾಡ ವಲಯದ ಮಾಜಿ ನಿಮಂತ್ರಕ ಬಾಬಾ ಭೂಸದ ಮಾತನಾಡಿ ‘ಸ್ಪರ್ಧಾತ್ಮಕವಾಗಿ ನೀವೆಲ್ಲ ಇಷ್ಟೊಂದು ಉತ್ಸಾಹದಿಂದ ಟೂರ್ನಿಯಲ್ಲಿ ಪಾಲ್ಗೊಂಡಿದ್ದು ಖುಷಿ ನೀಡಿದೆ. ಈಗಿನಿಂದಲೇ ನೀವೆಲ್ಲರೂ ಫಿಟ್‌ನೆಸ್‌ಗೆ ಒತ್ತು ಕೊಡಬೇಕು’ ಎಂದರು.

ಪಂಜುರ್ಲಿ ಗ್ರೂಪ್‌ ಆಫ್‌ ಹೋಟೆಲ್‌ನ ಮಾಲೀಕ ರಾಜೇಂದ್ರ ಶೆಟ್ಟಿ ‘ಬೆಳೆಯುವ ಮಕ್ಕಳು ನಿತ್ಯ ಮನೆಯಿಂದ ತಂದೆ–ತಾಯಿಗೆನಮಸ್ಕರಿಸಿಯೇ ಹೊರಬರುವುದನ್ನು ರೂಢಿಸಿಕೊಳ್ಳಬೇಕು. ಪೋಷಕರು ಹಾಗೂ ಗುರುವನ್ನು ಗೌರವದಿಂದ ಕಂಡಾಗ ಮಾತ್ರ ಬದುಕಿನಲ್ಲಿ ನೀವು ಬಯಸಿದ ಎಲ್ಲವೂ ಸಿಗುತ್ತವೆ’ ಎಂದರು.

ಪಂಜುರ್ಲಿ ಗ್ರೂಪ್‌ ಆಫ್‌ ಹೋಟೆಲ್‌ನ ಇನ್ನೊಬ್ಬಮಾಲೀಕ ಶಶಿಕಾಂತ ಶೆಟ್ಟಿ, ವಿಮಲ್‌ ಗ್ರೂಪ್‌ನ ಕರ್ನಾಟಕ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ ಸಂಪಗಿ, ವಿಜಯ ಕುಲಕರ್ಣಿ, ಸಂದೇಶ ಬೈಲಪ್ಪನವರ, ನಾಗೇಶಪಾಲ್ಗೊಂಡಿದ್ದರು.

ಆಟಗಾರ್ತಿಯರಿಗೆ ವಿಶೇಷ ಗೌರವ

ಧಾರವಾಡ ವಲಯದಲ್ಲಿ ಸಾಧನೆಯ ಭರವಸೆ ಮೂಡಿಸಿರುವ ಚಾಂಪಿಯನ್ಸ್‌ ನೆಟ್‌ ಕ್ರಿಕೆಟ್‌ ಕೇಂದ್ರದ ಸಂಜನಾ ವೆರ್ಣೇಕರ ಮತ್ತು ಲಕ್ಷ್ಮಿ ಬಾಗೇವಾಡಿ, ದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿಯ ಭೂಮಿಕಾ ಆರ್‌. ಮತ್ತು ಇಂದುಮತಿ ಓದುಗೌಡರ ಅವರಿಗೆ ಭರವಸೆಯ ಆಟಗಾರ್ತಿಯರು ಎನ್ನುವ ವಿಶೇಷ ಗೌರವ ನೀಡಲಾಯಿತು.

ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ಬಿಡಿಕೆ ತಂಡದ ಮಣಿಕಂಠ ಬಿ. ಅತ್ಯುತ್ತಮ ಬ್ಯಾಟ್ಸ್‌ಮನ್‌, ಫಸ್ಟ್‌ ಕ್ರಿಕೆಟ್‌ ಅಕಾಡೆಮಿಯ ಶ್ರೇಯಾನ್ಶ್‌ ಎ.ಎನ್‌. ಅತ್ಯುತ್ತುಮ ಬೌಲರ್‌, ಇದೇ ಅಕಾಡೆಮಿ ಶೈಬಾಜ್‌ ಜೆ. ಟೂರ್ನಿ ಶ್ರೇಷ್ಠ ಮತ್ತು ಧಾರವಾಡದ ವಸಂತ ಮುರ್ಡೇಶ್ವರ ಅಕಾಡೆಮಿಯ ಅಖಿಲ್ ಎಸ್‌. ಭರವಸೆಯ ಆಟಗಾರ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.