ಹುಬ್ಬಳ್ಳಿ: ಚುರುಕಿನ ಬೌಲಿಂಗ್ ಮಾಡಿದ ಬೆಳಗಾವಿ ನಗರ ತಂಡ, ಕೆಎಸ್ಸಿಎ ಧಾರವಾಡ ವಲಯದ ಆಶ್ರಯದಲ್ಲಿ ನಡೆಯುತ್ತಿರುವ 14 ವರ್ಷದ ಒಳಗಿನವರ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ 160 ರನ್ಗಳ ಭರ್ಜರಿ ಗೆಲುವು ಪಡೆಯಿತು.
ರಾಜನಗರದಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಳಗಾವಿಯ ತಂಡ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿತು. ಸಿದ್ದೇಶ ಅಸಲಕರ 168 ಎಸೆತಗಳಲ್ಲಿ 87 ರನ್ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಎದುರಾಳಿ ಕಾರವಾರ ನಗರ ತಂಡ 19.3 ಓವರ್ಗಳಲ್ಲಿ 34 ರನ್ ಮಾತ್ರ ಗಳಿಸಿ ಆಲೌಟ್ ಆಯಿತು. ಅರ್ಜುನ ಜಗದೀಶ ನಾಲ್ಕು, ಅಕ್ಷಯ ಬಗಾಡಿ ಮತ್ತು ಸಮರ್ಥ ಪವಾಲೆ ತಲಾ ಮೂರು ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿದರು.
ಹುಬ್ಬಳ್ಳಿ ತಂಡಕ್ಕೆ ಗೆಲುವು:
ಮಂಗಳವಾರ ನಡೆದ ಪಂದ್ಯದಲ್ಲಿ ಗದಗ ಜಿಲ್ಲಾ ತಂಡದ ಎದುರು ಹುಬ್ಬಳ್ಳಿ ನಗರ ತಂಡ ಹತ್ತು ವಿಕೆಟ್ಗಳ ಸುಲಭ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಗದಗ ತಂಡ 27.1 ಓವರ್ಗಳಲ್ಲಿ 94 ರನ್ ಗಳಿಸಿ ಆಲೌಟ್ ಆಯಿತು. ಕುಣಾಲ್ ಶಾನಭಾಗ್ ಎರಡು, ಬಿ. ಭುವನ್ ಎರಡು ಮತ್ತು ಸಾಗರ ಬನಹಟ್ಟಿ ಮೂರು ವಿಕೆಟ್ಗಳನ್ನು ಕಬಳಿಸಿದರು.
ಸಾಧಾರಣ ಮೊತ್ತದ ಗುರಿಯನ್ನು ಹುಬ್ಬಳ್ಳಿ ತಂಡ 12.5 ಓವರ್ಗಳಲ್ಲಿ ತಲುಪಿತು. ಅಭಯ ಕುಲಕರ್ಣಿ (ಅಜೇಯ 44) ಮತ್ತು ವೀರಜ್ ಹಾವೇರಿ (ಅಜೇಯ 44) ಮೊದಲ ವಿಕೆಟ್ಗೆ 98 ರನ್ ಜೊತೆಯಾಟವಾಡಿ ಗೆಲುವು ತಂದುಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.