ADVERTISEMENT

ಅಂಧರ ಕ್ರಿಕೆಟ್‌: ಭಾರತಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:50 IST
Last Updated 26 ಜುಲೈ 2019, 19:50 IST

ಜಮೈಕಾ: ವೆಂಕಟೇಶ್ವರ ರಾವ್‌ ಅವರ ಸೊಗಸಾದ ಅರ್ಧಶತಕದ (ಔಟಾಗದೇ 84 ರನ್‌) ಬಲದಿಂದ ಭಾರತ ಅಂಧರ ಕ್ರಿಕೆಟ್‌ ತಂಡ ಕಿಂಗ್‌ಸ್ಟನ್‌ನಲ್ಲಿ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಜಮೈಕಾ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಸರಣಿಯನ್ನು 3–0ಯಿಂದ ವಶಪಡಿಸಿಕೊಂಡಿದೆ.

ಟಾಸ್‌ ಗೆದ್ದ ಜಮೈಕಾ ಬ್ಯಾಟಿಂಗ್‌ ಆಯ್ದುಕೊಂಡಿತು. ಪ್ರವಾಸಿ ತಂಡದ ದೀಪಕ್‌ ಎರಡನೇ ಓವರ್‌ನಲ್ಲೇ ಆತಿಥೇಯ ತಂಡದ ಗ್ರೆಗೊರಿ ಸ್ಟಿವರ್ಟ್‌ (3) ವಿಕೆಟ್‌ ಉರುಳಿಸಿದರು. ಬಳಿಕ ಆತಿಥೇಯ ತಂಡ ಚೇತರಿಸಿಕೊಳ್ಳಲೇ ಇಲ್ಲ. 23 ಓವರ್‌ ಮಾತ್ರ ಆಡಿದ ಜಮೈಕಾ, 105 ರನ್‌ ಗಳಿಸಿ ಎಲ್ಲ ವಿಕೆಟ್‌ ಕೈಚೆಲ್ಲಿತು. ಭಾರತದ ಪರ ದೀಪಕ್‌ ಎರಡು ವಿಕೆಟ್‌ ಗಳಿಸಿದರೆ, ಅಜಯ್‌ ಮತ್ತು ಸುನಿಲ್‌ ತಲಾ ಮೂರು ವಿಕೆಟ್‌ ಉರುಳಿಸಿದರು.

ಕಡಿಮೆ ಮೊತ್ತದ ಗುರಿ ಬೆನ್ನತ್ತಿದ ಪ್ರವಾಸಿ ತಂಡ ಪಂಕಜ್‌ ಭುವೆ ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತು. ಈ ವೇಳೆ ಅಮೋಘ ಆಟ ಆಡಿದ ವೆಂಕಟೇಶ್ವರ ರಾವ್‌ ತಂಡಕ್ಕೆ ಜಯ ದೊರಕಿಸಿಕೊಟ್ಟರು.

ADVERTISEMENT

ಶನಿವಾರ ಎರಡನೇ ಟ್ವೆಂಟಿ–20 ಪಂದ್ಯ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಜಮೈಕಾ: 22.4 ಓವರ್‌ಗಳಲ್ಲಿ 105 (ಗ್ರಹಾಂ ಔಟಾಗದೇ 21, ಜೇಮ್ಸ್ 17, ಮೈಲ್ಸ್ 14; ಸುನಿಲ್‌ 3ಕ್ಕೆ 20, ಅಜಯ್‌ 3ಕ್ಕೆ 38, ದೀಪಕ್‌ 2ಕ್ಕೆ 21) ಭಾರತ: 9.4 ಓವರ್‌ಗಳಲ್ಲಿ 1ವಿಕೆಟ್‌ಗೆ 107 (ವೆಂಕಟೇಶ್ವರ ರಾವ್‌ ಔಟಾಗದೆ 84, ಸೋನು ಔಟಾಗದೆ 6; ಮೈಲ್ಸ್ 1ಕ್ಕೆ 53) ಫಲಿತಾಂಶ: ಭಾರತಕ್ಕೆ 9 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ವೆಂಕಟೇಶ್ವರ ರಾವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.