ಬೆಂಗಳೂರು: ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಕ್ಯಾಬಿ) ಮತ್ತು ಸಮರ್ಥನಂ ಸಂಸ್ಥೆ ಆಯೋಜಿಸಿರುವ ಅಂಧರ ತ್ರಿಕೋನ ಕ್ರಿಕೆಟ್ ಸರಣಿ ಅಕ್ಟೋಬರ್ 5ರಿಂದ 13ರ ವರೆಗೆ ನಡೆಯಲಿದೆ. ನಗರದ ಥಣಿಸಂದ್ರದಲ್ಲಿರುವ ಸಂಪ್ರಸಿದ್ಧಿ ಕ್ರೀಡಾಂಗಣದಲ್ಲಿ ಮೊದಲ ಎರಡು ಪಂದ್ಯಗಳು ನಡೆಯಲಿದ್ದು ನಂತರ ಗೋವಾದಲ್ಲಿ ಹಣಾಹಣಿ ನಡೆಯಲಿದೆ.
ಭಾರತ, ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳು ಪಾಲ್ಗೊಳ್ಳುತ್ತಿದ್ದು ಭಾರತದಲ್ಲಿ ಇದೇ ಮೊದಲ ಬಾರಿ ಅಂಧರ ತ್ರಿಕೋನ ಕ್ರಿಕೆಟ್ ಸರಣಿ ನಡೆಯುತ್ತಿದೆ ಎಂದು ಸಮರ್ಥನಂ ಸಂಸ್ಥೆಯ ಸ್ಥಾಪಕ ಮಹಾಂತೇಶ್ ಜಿ.ಕೆ. ಗುರುವಾರ ತಿಳಿಸಿದರು.
‘ಐದರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಸೆಣಸಲಿದ್ದು ಆರರಂದು ಆತಿಥೇಯರನ್ನು ಇಂಗ್ಲೆಂಡ್ ಎದುರಿಸಲಿದೆ. ಏಳರಂದು ವಿಶ್ರಾಂತಿ ದಿನವಾಗಿದ್ದು ಎಂಟರಂದು ಶ್ರೀಲಂಕಾ–ಇಂಗ್ಲೆಂಡ್, ಒಂಬತ್ತರಂದು ಭಾರತ–ಇಂಗ್ಲೆಂಡ್, 10ರಂದು ಭಾರತ–ಶ್ರೀಲಂಕಾ, 11ರಂದು ಶ್ರೀಲಂಕಾ–ಇಂಗ್ಲೆಂಡ್ ಪಂದ್ಯ ನಡೆಯಲಿದೆ. 12ರಂದು ಸೆಮಿಫೈನಲ್ ಮತ್ತು 13ರಂದು ಫೈನಲ್ ನಡೆಯಲಿದೆ. ಎಲ್ಲ ಪಂದ್ಯಗಳು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿವೆ’ ಎಂದು ಅವರು ವಿವರಿಸಿದರು. ಪಂದ್ಯಗಳು www.blindcricket.inನಲ್ಲಿ ನೇರ ಪ್ರಸಾರವಾಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.