ಲಂಡನ್: ಲಾರ್ಡ್ಸ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಕನ್ನಡಿಗ ಕೆ.ಎಲ್ ರಾಹುಲ್ ಅವರ ಮೇಲೆ ಶಾಂಪೇನ್ ಬಾಟಲಿಯ ಮುಚ್ಚಳ (ಬಾಟಲ್ ಕಾರ್ಕ್ ) ಎಸೆಯಲಾಗಿದೆ.
ಭಾರತದ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಅವರು ಮೊದಲ ಇನ್ನಿಂಗ್ಸ್ನಲ್ಲಿ ಶತಕ (129) ಗಳಿಸಿ ಇಂಗ್ಲೆಂಡ್ ತಂಡವನ್ನು ಕಾಡಿದ್ದರು.
ಪಂದ್ಯದ 69ನೇ ಓವರ್ನ ವೇಳೆ, ಮೊಹಮದ್ ಶಮಿ ಅವರು ಬೌಲಿಂಗ್ ಮಾಡುತ್ತಿದ್ದಾಗ, ಪ್ರೇಕ್ಷಕರ ಗ್ಯಾಲರಿಯಿಂದ ರಾಹುಲ್ ಮೇಲೆ ಶಾಂಪೇನ್ ಬಾಟಲಿ ಮುಚ್ಚಳ ಎಸೆಯಲಾಗಿದೆ. ಈ ವೇಳೆ ಅವರು ಬೌಂಡರಿ ಗೆರೆಯ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದರು.
ಘಟನೆಯಿಂದ ಬೇಸರಗೊಂಡಂತೆ ಕಂಡ ವಿರಾಟ್ ಕೊಹ್ಲಿ ಅವರು, ಮುಚ್ಚಳವನ್ನು ಎಸೆಯುವಂತೆ ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಅಂಪೈರ್ಗಳಾದ ಮೈಕೆಲ್ ಗಾಗ್ ಮತ್ತು ರಿಚರ್ಡ್ ಇಲ್ಲಿಂಗ್ವರ್ತ್ ಅವರೊಂದಿಗೆ ಮಾತುಕತೆ ನಡೆಸಿದರು. ಹೀಗಾಗಿ ಪಂದ್ಯ ಕೆಲಕಾಲ ಸ್ತಗಿತಗೊಂಡಿತ್ತು. ಈ ಬಗ್ಗೆ ಭಾರತದ ಆಟಗಾರರು ಅಂಪೈರ್ಗೆ ದೂರು ನೀಡಿದ್ದಾರೆಯೇ ಅಥವಾ ವಿಷಯವನ್ನು ಅವರ ಗಮನಕ್ಕೆ ಮಾತ್ರ ತಂದಿದ್ದಾರೆಯೇ ಎಂಬುದು ಗೊತ್ತಾಗಿಲ್ಲ.
ಈ ವರ್ಷದ ಆರಂಭದಲ್ಲಿ, ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಜನಾಂಗೀಯ ನಿಂದನೆಗಳನ್ನು ಎದುರಿಸಿತ್ತು. ಮೊಹಮ್ಮದ್ ಸಿರಾಜ್ ಅವರನ್ನು ನಿಂದಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.