
ಜೋಹಾನೆಸ್ಬರ್ಗ್: ಇತ್ತೀಚಿನ ಭಾರತ ಪ್ರವಾಸದ ವೇಳೆ ಅಭಿರುಚಿಹೀನ ಹೇಳಿಕೆ ನೀಡಿದ್ದಕ್ಕೆ ಜಸ್ಪ್ರೀತ್ ಬೂಮ್ರಾ ಮತ್ತು ರಿಷಭ್ ಪಂತ್ ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ತಂಡದ ಕೋಚ್ ಶುಕ್ರಿ ಕೊನ್ರಾಡ್ ಅವರು ‘ಗ್ರೊವೆಲ್’ ಪದ ಬಳಸಿದ್ದು ಸರಿಯಿರಲಿಲ್ಲ ಎಂದೂ ಬವುಮಾ ಹೇಳಿದ್ದಾರೆ.
ಒಂದೆರಡು ಹೇಳಿಕೆಗಳನ್ನು ಬಿಟ್ಟರೆ, ಸುಮಾರು ಒಂದೂವರೆ ತಿಂಗಳ ಸರಣಿಯು ಶಾಂತಿಯುತವಾಗಿ ನಡೆದಿತ್ತು. 25 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಆದರೆ ಭಾರತ ತಂಡವು ಏಕದಿನ ಮತ್ತು ಟಿ20 ಸರಣಿಯನ್ನು ಗೆದ್ದುಕೊಂಡಿತ್ತು.
ಮೊದಲ ಟೆಸ್ಟ್ ಪಂದ್ಯದ ವೇಳೆ ಈ ಬೂಮ್ರಾ ಮತ್ತು ಪಂತ್ ಅವರು ಬವುಮಾ ಅವರನ್ನು ಹಿಂದಿಯಲ್ಲಿ ‘ಬೌನಾ’ (ಕುಳ್ಳ) ಎಂದಿದ್ದರು.
‘ಅವರಿಬ್ಬರು (ಪಂತ್ ಮತ್ತು ಬೂಮ್ರಾ) ಅವರ ಭಾಷೆಯಲ್ಲಿ ನನ್ನ ಬಗ್ಗೆ ಏನೊ ಹೇಳಿದ್ದರು. ದಿನದಾಟದ ಕೊನೆಗೆ ಇಬ್ಬರೂ ಬಂದು ಕ್ಷಮೆ ಕೇಳಿದರು. ಅವರು ಏನು ಅಂದಿದ್ದರು ಎಂದು ನನಗೆ ಗೊತ್ತಾಗಲಿಲ್ಲ. ದಿನದಾಟದ ನಂತರ ತಂಡದ ಮಾಧ್ಯಮ ಮ್ಯಾನೇಜರ್ ಬಳಿ ಅದೇನೆಂದು ಕೇಳಿ ತಿಳಿದುಕೊಂಡೆ’ ಎಂದು ಬವುಮಾ ಹೇಳಿದ್ದಾರೆ.
ಈ ಹಿಂದೆಇಂಗ್ಲೆಂಡ್ ತಂಡದ ಟೋನಿ ಗ್ರೆಗ್ ಅವರು 1976ರಲ್ಲಿ ವೆಸ್ಟ್ ಇಂಡೀಸ್ ತಂಡದ ಎದುರು ಸರಣಿಯ ವೇಳೆ ಬಳಸಿದ ‘ಕುಪ್ರಸಿದ್ಧ’ ಗ್ರೊವೆಲ್ ಪದವನ್ನು ಕೊನ್ರಾಡ್ ಅವರು ಎರಡನೇ ಟೆಸ್ಟ್ ವೇಳೆ ಭಾರತ ತಂಡವ ವಿರುದ್ಧ ಬಳಸಿದ್ದರು. ‘ಭಾರತ ತಂಡವನ್ನು ಅಡಿಯಾಳಾಗಿ ಮಾಡಲು ನಾವು ಬಯಸಿದ್ದೇವೆ’ ಎಂದಿದ್ದರು. ಕೊನ್ರಾಡ್ ನಂತರ ಕ್ಷಮೆ ಕೇಳಿದ್ದರು. ಅವರು ಪದ ಪ್ರಯೋಗ ಮಾಡುವಾಗ ಎಚ್ಚರಿಕೆ ವಹಿಸಬೇಕಿತ್ತು ಎಂದು ಬವುಮಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.