ADVERTISEMENT

ಕೆಪಿಎಲ್ ಸ್ಪಾಟ್ ಫಿಕ್ಸಿಂಗ್‌: ಬಳ್ಳಾರಿ ತಂಡದ ನಾಯಕ ಸಹಿತ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 3:04 IST
Last Updated 7 ನವೆಂಬರ್ 2019, 3:04 IST
ಸಿ.ಎಂ.ಗೌತಮ್‌ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌
ಸಿ.ಎಂ.ಗೌತಮ್‌ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌   

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ (ಕೆಪಿಎಲ್) ಟೂರ್ನಿಯಲ್ಲಿ‌ ನಡೆದಿದೆ ಎನ್ನಲಾದ ಕ್ರಿಕೆಟ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಈ ನಿಟ್ಟಿನಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದು, ಮತ್ತಿಬ್ಬರು ಪ್ರಮುಖ ಆಟಗಾರರನ್ನು ಬಂಧಿಸಿದ್ದಾರೆ.

ಪಂದ್ಯವೊಂದರಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಬಳ್ಳಾರಿ ತಂಡದ ನಾಯಕ ಸಿ.ಎಂ. ಗೌತಮ್ ಮತ್ತು ಆಟಗಾರ ಅಬ್ರಾರ್ ಖಾಜಿ ಬಂಧಿತರು.

ಅವರಿಬ್ಬರೂ 2019ರ ಕೆಪಿಎಲ್ ಟೂರ್ನಿಯ ಹುಬ್ಬಳ್ಳಿ ಮತ್ತು ಬಳ್ಳಾರಿ ನಡುವಿನ ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು ಎನ್ನಲಾಗಿದೆ. ಆ ಪಂದ್ಯದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಅವರು 20 ಲಕ್ಷ ಪಡೆದಿದ್ದರು. ಅಲ್ಲದೆ, ಅವರು ಬೆಂಗಳೂರು ತಂಡದ ವಿರುದ್ಧದ ಇನ್ನೊಂದು ಪಂದ್ಯದಲ್ಲೂ ಮ್ಯಾಚ್ ಫಕ್ಸಿಂಗ್ ಮಾಡಿದ್ದರು ಎಂದೂ ತನಿಖೆಯಲ್ಲಿ ಗೊತ್ತಾಗಿದೆ.

ಸಿ.ಎಂ. ಗೌತಮ್ ರಣಜಿ, ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಮತ್ತು ದಿಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಐಪಿಎಲ್ ಟೂರ್ನಿಯಲ್ಲಿ ಆಡಿದ್ದಾರೆ. ಕರ್ನಾಟಕ ತಂಡದ ಪರ ರಣಜಿ ಆಡಿರುವ ಅಬ್ರಾರ್ ಖಾಜಿ, ಈಗ ಮಿಜೋರಾಂ ಪರ ಆಡುತ್ತಿದ್ದಾರೆ.

ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಶೀಘ್ರದಲ್ಲೇ ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ ಪಾಟೀಲ ತಿಳಿಸಿದರು.

ಇದನ್ನೂ ಓದಿ: 20 ಆಟಗಾರರ ವಿಚಾರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.