ಹುಬ್ಬಳ್ಳಿ: ಆಲ್ರೌಂಡ್ ಪ್ರದರ್ಶನ ತೋರಿದ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ (ಬಿಎಸ್ಸಿ) ತಂಡ, 14 ವರ್ಷದ ಒಳಗಿನವರ ಲೀಲಾವತಿ ಪ್ಯಾಲೇಸ್ ಕಪ್ ಅಂತರ ಕ್ಯಾಂಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ಇಲ್ಲಿನ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶುಕ್ರವಾರ ಬಿಎಸ್ಸಿ ತಂಡ ಹತ್ತು ವಿಕೆಟ್ಗಳ ಗೆಲುವು ಸಾಧಿಸಿ ಈ ಸಾಧನೆ ಮಾಡಿತು.
ಟಾಸ್ ಗೆದ್ದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಮೊದಲು ಬ್ಯಾಟ್ ಮಾಡಿ 30 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು. ಗಣೇಶ ಡಿ. (42) ಉತ್ತಮ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು. ಈ ಗುರಿಯನ್ನು ಬಿಎಸ್ಸಿ 20 ಓವರ್ಗಳಲ್ಲಿ ತಲುಪಿತು. ಆರಂಭಿಕ ಜೋಡಿ ಅಶುತೋಷ (ಅಜೇಯ 70, 61 ಎಸೆತ, 12 ಬೌಂಡರಿ) ಮತ್ತು ಸಂಚಿತ್ ಆರ್.ಎಸ್. (ಅಜೇಯ 32, 59 ಎಸೆತ,2 ಬೌಂಡರಿ) ಸುಲಭವಾಗಿ ಗೆಲುವು ತಂದುಕೊಟ್ಟಿತು. ಅಶುತೋಷ್ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ವೈಯಕ್ತಿಕ ಪ್ರಶಸ್ತಿಗಳು: ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ನ ಭುವನ ಬಸಿಡೋಣಿ (ಉತ್ತಮ ಬ್ಯಾಟ್ಸ್ಮನ್), ಚಾಂಪಿಯನ್ಸ್ ನೆಟ್ ತಂಡದ ಹೇತ್ ಪಟೇಲ (ಉತ್ತಮ ಬೌಲರ್), ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯ ಆದಿತ್ಯ ಎನ್. ಖಿಲಾರೆ (ಟೂರ್ನಿ ಶ್ರೇಷ್ಠ ಆಟಗಾರ) ಮತ್ತು ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ನ ಅಶುತೋಷ ಹಿರೇಮಠ (ಉದಯೋನ್ಮುಖ ಆಟಗಾರ) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ನ ರಾಜೇಶ ಶೆಟ್ಟಿ, ಶಶಿಕಾಂತ ಶೆಟ್ಟಿ, ಶ್ರೀದೇವಿ ಟಿಂಬರ್ಸ್ನ ಲಲಿತ್ ಪಟೇಲ, ಕ್ರಿಕೆಟಿಗ ಡಾ. ಲಿಂಗರಾಜ ಬಿಳೇಕಲ್, ಮಂಜುನಾಥ ಕಾಳೆ ಮತ್ತು ಟೂರ್ನಿಯ ಸಂಘಟಕ ಸಂದೇಶ ಬೈಲಪ್ಪನವರ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.