ಶಾರ್ಜಾ: ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ಸಂಜೆ ಕಣಕ್ಕಿಳಿಯಲಿದೆ.
ಆಡಿರುವ ಎಂಟು ಪಂದ್ಯಗಳಲ್ಲಿ ಅರ್ಧ ಡಜನ್ ಜಯ ದಾಖಲಿಸಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಯುವಪಡೆಯು ಈಗ ಎಲ್ಲ ವಿಭಾಗಗಳಲ್ಲಿಯೂ ಸಮತೋಲನವಾಗಿದೆ. ಸೋಲಿನಂಚಿನಲ್ಲಿಯೂ ಹೋರಾಡಿ ಪಂದ್ಯದ ಫಲಿತಾಂಶವನ್ನು ತಮ್ಮತ್ತ ಸೆಳೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಶ್ರೇಯಸ್, ಶಿಖರ್ ಧವನ್, ಶಿಮ್ರೊನ್ ಹೆಟ್ಮೆಯರ್ ಮತ್ತು ಪೃಥ್ವಿ ಶಾ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ನಲ್ಲಿಆರ್. ಆಶ್ವಿನ್, ಎನ್ರಿಕ್ ನೊಟಿಯೆ, ಅಕ್ಷರ್ ಪಟೇಲ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರ ಮೇಲೆ ಡೆಲ್ಲಿ ಭರವಸೆ ಇಟ್ಟುಕೊಂಡಿದೆ.
ಆದರೆ, ಅನುಭವಿ ನಾಯಕ ಮಹೇಂದ್ರಸಿಂಗ್ ಧೋನಿ ಅವರ ‘ತಂತ್ರಗಾರಿಕೆ’ಯನ್ನು ಎದುರಿಸುವ ಸವಾಲು ಶ್ರೇಯಸ್ ಮುಂದಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ಚೆನ್ನೈ ಎದುರು ಡೆಲ್ಲಿ ಗೆದ್ದಿತ್ತು. ಧೋನಿ ಬಳಗದಲ್ಲಿ ಶೇನ್ ವಾಟ್ಸನ್, ಫಾಫ್ ಡುಪ್ಲೆಸಿ, ಅಂಬಟಿ ರಾಯುಡು, ಧೋನಿ ಮತ್ತು ರವೀಂದ್ರ ಜಡೇಜ ಅವರಿಂದಲೇ ರನ್ ಗಳಿಕೆಯ ನಿರೀಕ್ಷೆ ಮಾಡಬಹುದು. ಆಲ್ರೌಂಡ್ ಆಟವಾಡುತ್ತಿರುವ ಸ್ಯಾಮ್ ಕರನ್, ದೀಪಕ್ ಚಾಹರ್ ಮತ್ತು ಶಾರ್ದೂಲ್ ಠಾಕೂರ್ ಅವರ ಬೌಲಿಂಗ್ ಪಡೆಯ ಮೇಲೆ ಡೆಲ್ಲಿ ಬ್ಯಾಟಿಂಗ್ ಬಳಗವನ್ನು ಕಟ್ಟಿಹಾಕುವ ಸವಾಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.