ಧಾರವಾಡ: ಒಂದು ಓವರ್ನಲ್ಲಿ ಎರಡು ಬೌಂಡರಿ ಬಾರಿಸುವ ಮೂಲಕ ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಅಳ್ನಾವರ ತಾಲ್ಲೂಕಿನ ಹೊನ್ನಾಪುರದಲ್ಲಿ ಗ್ರಾಮ ಪಂಚಾಯ್ತಿಗೆ ಆಯ್ಕೆಯಾದ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬುಧವಾರ ಸಂಜೆ ಕಾರಿನಲ್ಲಿ ತೆರಳುತ್ತಿದ್ದ ಅವರು ಕಡಬಗಟ್ಟಿ ಸಮೀಪ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದುದನ್ನು ಕಂಡು ಮೈದಾನಕ್ಕೆ ಇಳಿದೇಬಿಟ್ಟರು.
ಕ್ರಿಕೆಟ್ ಟೂರ್ನಿಯ ರೋಚಕ ಪಂದ್ಯದ ನಡುವೆ ಪ್ರವೇಶಿಸಿದ ತಮ್ಮ ಕ್ಷೇತ್ರದ ಹಿಂದಿನ ಶಾಸಕ ಸಂತೋಷ್ ಲಾಡ್ ಕಂಡು ಯುವಕರು ಉತ್ಸಾಹದಿಂದ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸಿದರು. ಮೈದಾನಕ್ಕೆ ಇಳಿದವರೇ ಬ್ಯಾಟ್ ಹಿಡಿದು ಆಟಕ್ಕೆ ಸಜ್ಜಾದರು. ಒಂದು ಓವರ್ನಲ್ಲಿ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ಸಂತೋಷ್ ಅವರ ಕೈಚಳಕ ಕಂಡು ಜನರು ಬೆರಗಾದರು.
‘ಇಲ್ಲಿ ಆಡಿದ ಆಟ ಬಾಲ್ಯದ ನೆನಪನ್ನ ಮತ್ತೆ ನೆನಪಿಸಿತು. ಯುವಕರು ಆಟ ಹಾಗೂ ಪಾಠಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಆರೋಗ್ಯ ಕುರಿತು ಕಾಳಜಿ ವಹಿಸಬೇಕು. ದುಶ್ಚಟಗಳ ದಾಸರಾಗಬಾರದು’ ಎಂದರು.
ಲಾಡ್ ಕ್ರಿಕೆಟ್ ಆಡುತ್ತಿರುವ ಮಾಹಿತಿ ಪಡೆದ ಸುತ್ತಮುತ್ತಲಿನ ಜನ ಕೆಲವೇ ನಿಮಿಷಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದರು. ಮೈದಾನದಿಂದ ನಿರ್ಗಮಿಸಿದ ನಂತರ ಟೂರ್ನಿ ಮತ್ತೆ ಮುಂದುವರೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.