ನವದೆಹಲಿ: ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಮಾರಣಾಂತಿಕವಾಗಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆ ಮಾಡುವುದು ಸರಿಯಲ್ಲ, ಅದನ್ನ ರದ್ದುಗೊಳಿಸಿ ಆ ದುಡ್ಡನ್ನು ಆಮ್ಲಜನಕ ಸಿಲಿಂಡರ್ ಖರೀದಿಸಲು ನೀಡುವಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮನವಿ ಮಾಡಿದ್ದಾರೆ.
'ನಾವು ಸಾಂಕ್ರಾಮಿಕ ರೋಗದ ಅತಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಜೂನ್ ತಿಂಗಳಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಪುನರಾರಂಭಿಸಬಾರದು. ಐಪಿಎಲ್ ಕೂಡಾ ಆಯೋಜಿಸಲು ಇದು ಸೂಕ್ತ ಸಮಯವಲ್ಲ. ಐಪಿಎಲ್ ಹಣವನ್ನು ಅಗತ್ಯವಿರುವವರಿಗೆ ನೀಡಿ, ಆಮ್ಲಜನಕ ಸಿಲಿಂಡರ್ ಖರೀದಿಸಿ ಜನರ ಪ್ರಾಣ ಉಳಿಸಿ' ಎಂದು ಹೇಳಿದ್ದಾರೆ.
'ಈ ಸಮಯದಲ್ಲಿ ಇಂತಹ ಕ್ರಿಕೆಟ್ ನಮಗೆ ಬೇಕಾಗಿಲ್ಲ. ಅಂತಹ ಹೀರೊಗಳು ಬೇಡ. ಮನರಂಜನೆಯೂ ಬೇಡ. ನಮಗೆ ಪಿಎಸ್ಎಲ್ ಅಥವಾ ಐಪಿಎಲ್ ಬೇಡ. ಭಾರತ ಹಾಗೂ ಪಾಕಿಸ್ತಾನದಲ್ಲಿ ಆ ಜೀವಗಳನ್ನು ಉಳಿಸಬೇಕೆಂದು ಬಯಸುತ್ತೇವೆ. ತುಂಬಾ ನೋವು ಹಾಗೂ ದುಃಖತಪ್ತರಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ಜನರ ಜೀವವೂ ಹೆಚ್ಚು ಮುಖ್ಯವೆನಿಸುತ್ತದೆ. ನಮ್ಮ ಶೋ ಕೂಡಾ ರದ್ದುಗೊಳಿಸಲು ಬಯಸುವುದಾದರೆ ಅದು ಕೂಡಾ ಆಗಲಿ' ಎಂದು ವಿನಂತಿಸಿದ್ದಾರೆ.
ಈ ಮೊದಲು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತಕ್ಕೆ ನೆರವಾಗುವಂತೆ ಪಾಕಿಸ್ತಾನ ಸರ್ಕಾರ ಹಾಗೂ ಅಭಿಮಾನಿಗಳಲ್ಲಿ ಅಖ್ತರ್ ಕರೆ ನೀಡಿದ್ದರು.
'ಈಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವುದು ಯಾವುದೇ ಸರ್ಕಾರಕ್ಕೆ ಕಷ್ಟಕರವಾಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಹಾಯ ಮಾಡುವಂತೆ ನನ್ನ ಸರ್ಕಾರ ಮತ್ತು ಅಭಿಮಾನಿಗಳಲ್ಲಿ ವಿನಂತಿ ಮಾಡುತ್ತೇನೆ. ಭಾರತಕ್ಕೆ ಸಾಕಷ್ಟು ಆಮ್ಲಜನಕದ ಸಿಲಿಂಡರ್ಗಳ ಅಗತ್ಯವಿದೆ. ಆಮ್ಲಜನಕ ಸಿಲಿಂಡರ್ಗಳನ್ನು ಭಾರತಕ್ಕೆ ಪೂರೈಸಲು ಪ್ರತಿಯೊಬ್ಬರೂ ದೇಣಿಗೆ ನೀಡಲು ನಾನು ಮನವಿ ಮಾಡುತ್ತೇನೆ' ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.