ಮೈಸೂರು: ಕರ್ನಾಟಕ ತಂಡದವರು ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶ ಎದುರು ಹಿನ್ನಡೆ ಅನುಭವಿಸಿದ್ದಾರೆ.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಈ ಪಂದ್ಯದಲ್ಲಿ ಆತಿಥೇಯ ತಂಡದವರು ಶುಕ್ರವಾರ ಮೊದಲ ಇನಿಂಗ್ಸ್ನಲ್ಲಿ 107.5 ಓವರ್ಗಳಲ್ಲಿ 275 ರನ್ಗಳಿಗೆ ಆಲೌಟಾಗಿ ಫಾಲೋಆನ್ಗೆ ಒಳಗಾದರು.159 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 10 ಓವರ್ಗಳಲ್ಲಿ 1 ವಿಕೆಟ್ಗೆ 19 ರನ್ ಗಳಿಸಿದ್ದಾರೆ. ಶನಿವಾರ ಪಂದ್ಯದ ಕೊನೆಯ ದಿನವಾಗಿದೆ.
ಮೊದಲ ಇನಿಂಗ್ಸ್ನಲ್ಲಿ 74 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ತಂಡಕ್ಕೆ ಲವನಿತ್ ಸಿಸೋಡಿಯಾ (82; 192 ಎಸೆತ, 10 ಬೌಂಡರಿ) ಹಾಗೂ ಸುಜಯ್ ಸಾತೇರಿ (45) ಆಸರೆಯಾದರು. ಇವರು ಐದನೇ ವಿಕೆಟ್ಗೆ 82 ರನ್ ಸೇರಿಸಿದರು. ಬಳಿಕ ವಿ.ವೈಶಾಕ್ ಹಾಗೂ ರಿಷಿ ಬೋಪಣ್ಣ ತುಸು ಪ್ರತಿರೋಧ ತೋರಿದರು.
ಕುನಾಲ್ ಯಾದವ್, ಶಿವ ಸಿಂಗ್, ಕರಣ್ ಶರ್ಮ ಬಿಗಿ ಬೌಲಿಂಗ್ ದಾಳಿ ಮೂಲಕ ಉತ್ತರ ಪ್ರದೇಶ ತಂಡ ಮೇಲುಗೈ ಸಾಧಿಸಲು ಕಾರಣರಾದರು.
ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಉತ್ತರ ಪ್ರದೇಶ: 140 ಓವರ್ಗಳಲ್ಲಿ 434; ಕರ್ನಾಟಕ: 107.5 ಓವರ್ಗಳಲ್ಲಿ 275 (ಲವನಿತ್ ಸಿಸೋಡಿಯಾ 82, ಸುಜಯ್ ಸಾತೇರಿ 45, ವಿ.ವೈಶಾಕ್ 41, ರಿಷಿ ಬೋಪಣ್ಣ 27; ಕುನಾಲ್ ಯಾದವ್ 52ಕ್ಕೆ3, ಶಿವ ಸಿಂಗ್ 65ಕ್ಕೆ4, ಕರಣ್ ಶರ್ಮ 48ಕ್ಕೆ2) ಎರಡನೇ ಇನಿಂಗ್ಸ್: ಕರ್ನಾಟಕ 10 ಓವರ್ಗಳಲ್ಲಿ 1 ವಿಕೆಟ್ಗೆ 19.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.