
ಮುಂಬೈ: ಬಾಲ್ಯದ ಗೆಳೆಯ ಪಲಾಶ್ ಮುಚ್ಛಲ್ ಜತೆಗಿನ ವಿವಾಹವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಿದ್ದ ಬೆನ್ನಲ್ಲೇ, ತಾರಾ ಬ್ಯಾಟರ್ ಸ್ಮೃತಿ ಮಂದಾನಾ ಅವರು ತಮ್ಮ ವಿವಾಹ ಕುರಿತು ಎಲ್ಲಾ ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮಗಳ ಖಾತೆಯಿಂದ ಅಳಿಸಿ ಹಾಕಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸ್ಮೃತಿ ಮಂದಾನಾ ಮತ್ತು ಪಲಾಶ್ ಮುಚ್ಛಲ್ ಜತೆಗಿನ ವಿವಾಹ ಸಮಾರಂಭವು ಭಾನುವಾರ (ನ. 23) ನಡೆಯಬೇಕಿತ್ತು. ಸ್ಮೃತಿ ಅವರ ತಂದೆಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದರಿಂದ ವಿವಾಹವನ್ನು ಮುಂದೂಡಲಾಗಿತ್ತು. ತಂದೆಯೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಿದ್ದ ಸ್ಮೃತಿ ಅವರು ಅವರ ಚೇತರಿಕೆಯವರೆಗೂ ಮದುವೆಯಾಗದಿರಲು ನಿರ್ಧರಿಸಿದ್ದಾರೆ ಎಂದು ಮಂದಾನ ಅವರ ಮ್ಯಾನೇಜರ್ ತುಹೀನ್ ಮಿಶ್ರಾ ಹೇಳಿದ್ದರು.
ಆದರೆ ಇದೀಗ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನೂ ಸ್ಮೃತಿ ಅಳಿಸಿ ಹಾಕಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಸ್ಮೃತಿ ಅವರ ಸ್ನೇಹಿತೆ ಜಮಿಮಾ ರೋಡ್ರಿಗಸ್ ಅವರೂ ತಮ್ಮ ಖಾತೆಗಳಿಂದ ಸ್ಮೃತಿ ಮದುವೆಗೆ ಸಂಬಂಧಿಸಿದ ಪೋಸ್ಟ್, ವಿಡಿಯೊಗಳನ್ನು ತೆಗೆದಿದ್ದಾರೆ.
ವಿವಾಹ ರದ್ದಾದ ಬೆನ್ನಲ್ಲೇ ಇಬ್ಬರ ನಡುವಿನ ಬಿರುಕುಗಳೇ ಕಾರಣ ಎಂಬ ಮಾತುಗಳೂ ಕೇಳಿಬಂದಿವೆ. ಮದುವೆ ಮುಂದೂಡಿದ ನಂತರ ಪಲಾಶ್ ಅವರು ನಾಪತ್ತೆಯಾಗಿರುವುದು ಹಾಗೂ ಪಲಾಶ್ ಅವರು ಬೇರೊಬ್ಬ ಯುವತಿಯೊಂದಿಗೆ ನಡೆಸಿದ್ದಾರೆ ಎನ್ನಲಾದ ವಾಟ್ಸ್ಆ್ಯಪ್ ಚಾಟ್ ಎಲ್ಲೆಡೆ ಹರಿದಾಡುತ್ತಿದೆ.
ಇದರ ನಡುವೆ ಸ್ಮೃತಿ ಮತ್ತು ಪಲಾಶ್ ಮದುವೆ ನಿಜವಾಗಿಯೂ ಮುರಿದು ಬಿತ್ತೇ ಎಂಬುದಕ್ಕೆ ಎರಡೂ ಕುಟುಂಬಗಳೇ ಸ್ಪಷ್ಟನೆ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.