ನವದೆಹಲಿ: ಕಿಂಗ್ಸ್ ಇಲೆವನ್ ಪಂಜಾಬ್ ಕ್ರಿಕೆಟ್ ತಂಡದ ಆಲ್ರೌಂಡರ್ ತಜಿಂದರ್ ಸಿಂಗ್ ಧಿಲ್ಲೋನ್ ಅವರು ಹತ್ತು ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರಿಗೆ ಆಹಾರ ಹಾಗೂ ನೀರು ಪೂರೈಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ನನ್ನ ಮನೆಯಿಂದ 100 ಮೀಟರ್ಸ್ ದೂರದಲ್ಲಿ ದೆಹಲಿಯಿಂದ ಕಾನ್ಪುರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದೆ. ಆ ಮಾರ್ಗವಾಗಿ ಸಾವಿರಾರು ಮಂದಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ ಎಂಬ ಸುದ್ದಿಯನ್ನು ಟಿ.ವಿ.ಯಲ್ಲಿ ನೋಡಿ ಮನಸ್ಸು ಭಾರವಾಯಿತು. ಅವರಿಗೆ ಆಹಾರ ಮತ್ತು ನೀರು ಪೂರೈಸಬೇಕೆಂದು ಅನಿಸಿತು. ನನ್ನ ಮನದಿಂಗಿತವನ್ನು ಕುಟುಂಬದವರ ಬಳಿ ವ್ಯಕ್ತಪಡಿಸಿದೆ. ಅದಕ್ಕವರು ಒಪ್ಪಿದರು. ನಮ್ಮ ಕಾರ್ಯಕ್ಕೆ ಸ್ನೇಹಿತರೂ ಕೈಜೋಡಿಸಿದರು’ ಎಂದು ತಜಿಂದರ್ ಅವರು ಕಿಂಗ್ಸ್ ಇಲೆವನ್ ವೆಬ್ಸೈಟ್ಗೆ ತಿಳಿಸಿದ್ದಾರೆ.
‘ನಮ್ಮ ಕಾಲೊನಿಯ ತರಕಾರಿ ವ್ಯಾಪಾರಿಯಿಂದ ರಿಯಾಯಿತಿ ದರದಲ್ಲಿ ಆಲೂಗೆಡ್ಡೆ ಖರೀದಿಸಿ ಅದರಿಂದ ಪಲ್ಯ ತಯಾರಿಸಿದೆವು. ಜೊತೆಗೆ ಪೂರಿಯನ್ನೂ ಸಿದ್ಧಪಡಿಸಿದೆವು. ಬ್ರೆಡ್ ತಯಾರಿಸಲು ನೆರೆ ಹೊರೆಯವರು ಸಹಕರಿಸಿದರು. ಮೊದಲ ದಿನ ಸಾವಿರ ಮಂದಿಗೆ ಆಹಾರ ವಿತರಿಸಿದರು. ಕ್ರಮೇಣ ಈ ಸಂಖ್ಯೆ ಐದು ಸಾವಿರ ದಾಟಿತು. ಚಿಕ್ಕ ಮಕ್ಕಳಿಗೆ ಹಾಲು ಮತ್ತು ಷರಬತ್ತು ಒದಗಿಸಿದೆವು’ ಎಂದು 27 ವರ್ಷ ವಯಸ್ಸಿನ ಆಟಗಾರ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.