ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಭಾರತದ ಪರ ಇನ್ನು ಆಡಬಹುದೆಂದು ಅನಿಸುತ್ತಿಲ್ಲ ಎಂದು ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ಕ್ರಿಕೆಟ್ ವಿಶ್ವಕಪ್ ಬಳಿಕ ಧೋನಿ ಅವರು ಭಾರತದ ಪರ ಯಾವುದೇ ಪಂದ್ಯ ಆಡಿಲ್ಲ. ಇದೀಗ ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಯಲ್ಲಿರುವುದು ಧೋನಿ ತಂಡಕ್ಕೆ ಮರಳುವ ಕುರಿತಾದ ಅನುಮಾನಗಳು ಹೆಚ್ಚಾಗಲು ಕಾರಣವಾಗಿದೆ. ಈ ವರ್ಷ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ಗಿಂತ ಮೊದಲು ನಡೆಯಬೇಕಿದ್ದ ಐಪಿಎಲ್ ಟೂರ್ನಿ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆಯಾಗಿದೆ. ರದ್ದಾಗುವ ಸಾಧ್ಯತೆಯೂ ಇದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಹರ್ಭಜನ್, ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವ ನಿರ್ಧಾರ ಧೋನಿಯವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ಐಪಿಎಲ್ನಲ್ಲಿ ಉಭಯ ಆಟಗಾರರೂ ಚೆನ್ನೈ ಸೂಪರ್ಕಿಂಗ್ಸ್ ತಂಡದ ಭಾಗವಾಗಿದ್ದಾರೆ.
‘ಅದು ಅವರಿಗೆ ಬಿಟ್ಟದ್ದು. ಅವರು (ಧೋನಿ) ಮತ್ತೆ ಭಾರತದ ಪರ ಆಡಲು ಬಯಸುತ್ತಾರೆಯೇ ಎಂಬುದನ್ನು ನೀವೇ ತಿಳಿದುಕೊಳ್ಳಬೇಕು’ ಎಂದು ಹರ್ಭಜನ್ ಹೇಳಿದ್ದಾರೆ.
‘ನನಗೆ ತಿಳಿದಿರುವ ಮಟ್ಟಿಗೆ ಅವರು ಮತ್ತೆ ಟೀಂ ಇಂಡಿಯಾ ಜೆರ್ಸಿ ತೊಡುವುದಿಲ್ಲ. ಐಪಿಎಲ್ನಲ್ಲಿ ಆಡುತ್ತಾರೆ. ಆದರೆ ಭಾರತ ಪರ 2019ರ ವಿಶ್ವಕಪ್ ಪಂದ್ಯವೇ ಕೊನೆ ಎಂದು ಅವರು ಮೊದಲೇ ನಿರ್ಧರಿಸಿದ್ದಾರೆ ಅನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.