ಚೆನ್ನೈ: ‘ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು ಕೊನೆಯ ಹಂತದಲ್ಲಿ ಉಪಯುಕ್ತ ಕಾಣಿಕೆ ನೀಡುವುದು ನನ್ನ ಕೆಲಸ. ಹೆಚ್ಚು ಓಡುವ ಕೆಲಸವನ್ನು ನನ್ನಿಂದ ಮಾಡಿಸಬೇಡಿ ಎಂದು ಸಹಆಟಗಾರರಿಗೆ ಸೂಚಿಸಿದ್ದೇನೆ. ಅವರೂ ಅದೇ ರೀತಿ ಮಾಡುತ್ತಿದ್ದಾರೆ‘ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಸಂತಸ ವ್ಯಕ್ತಪಡಿಸಿದರು.
ಬುಧವಾರ ಚೆಪಾಕ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಒಂಬತ್ತು ಎಸೆತಗಳಲ್ಲಿ 20 ರನ್ಗಳನ್ನು ಗಳಿಸಿದರು. ಚೆನ್ನೈ ಗೆಲುವು ಸಾಧಿಸಿತ್ತು.
ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಏನು ಮಾಡಬಲ್ಲೆ ಎಂಬುದನ್ನು ಸಹ ಆಟಗಾರರಿಗೆ ಸ್ಪಷ್ಟಪಡಿಸಿದ್ದೇನೆ. ಈ ರೀತಿಯ ಕಾಣಿಕೆ ನೀಡುತ್ತಿರುವುದು ಸಂತಸ ತಂದಿದೆ‘ ಎಂದರು.
‘166–170 ರನ್ಗಳ ಸ್ಕೋರ್ ಇದ್ದರೆ ಹೋರಾಟ ಮಾಡಲು ಸಾಧ್ಯ ಎನಿಸಿತ್ತು. ನಮ್ಮ ಬ್ಯಾಟಿಂಗ್ ಪಡೆಯು ಇನ್ನೂ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದೆ. ಈ ಪಂದ್ಯದಲ್ಲಿ ಮೋಯಿನ್ ಅಲಿ ಹಾಗೂ ರವೀಂದ್ರ ಜಡೇಜ ಅವರೂ ಕೆಲವು ಎಸೆತಗಳಿಗೆ ಬ್ಯಾಟಿಂಗ್ ಮಾಡಿದರು. ಟೂರ್ನಿಯ ಕೊನೆಯ ಹಂತಕ್ಕೆ ಬರುತ್ತಿದ್ದೇವೆ. ಈ ಹೊತ್ತಿನಲ್ಲಿ ತಂಡದ ಎಲ್ಲರೂ ತಮ್ಮ ಲಯಕ್ಕೆ ಮರಳುವುದು ಅಗತ್ಯ‘ ಎಂದರು.
41 ವರ್ಷದ ಧೋನಿ ಅವರು ಇದೇ ಕೊನೆಯ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆನ್ನಲಾಗಿದೆ. ಈ ಟೂರ್ನಿಯ ನಂತರ ಅವರು ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.