ನವದೆಹಲಿ: ‘ರಾಹುಲ್ ದ್ರಾವಿಡ್ ಮಗನ ಕಾರಣಕ್ಕಾಗಿ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ಮಾಡಲಾಯಿತು. ಕೋಚ್ ಆಯ್ಕೆಯಲ್ಲಿ ದ್ರಾವಿಡ್ ಅವರ ಮಗ ಪ್ರಭಾವ ಬೀರಿದ್ದಾನೆ,‘ ಎಂದು ಬಿಸಿಸಿಐ ಅಧ್ಯಕ್ಷ, ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಅವರು ಭಾನುವಾರ ಹೇಳಿದ್ದಾರೆ.
ಆದರೆ, ಗಂಗೂಲಿ ಈ ಮಾತು ಹೇಳಿದ್ದು ಲಘು ಬಗೆಯಲ್ಲಿ, ತಮಾಷೆಗಾಗಿ ಮಾತ್ರ.
40ನೇ ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗವಹಿಸಿದ್ದ ಗಂಗೂಲಿ, ಮಾಧ್ಯಮಗಳೊಂದಿಗೆ ಮಾತನಾಡಿದರು.
‘ದ್ರಾವಿಡ್ ಅವರ ಮಗನಿಂದ ನನಗೆ ಕರೆಯೊಂದು ಬಂದಿದೆ. ಅವರು ಮನೆಯಲ್ಲಿ ತುಂಬಾ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದಾರಂತೆ. ಹೀಗಾಗಿ, ದ್ರಾವಿಡ್ಗೆ ಕರೆ ಮಾಡಿ, ನೀನು ಈಗ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಸಮಯ ಎಂದು ತಿಳಿಸಿ, ಕೋಚ್ ಹುದ್ದೆ ವಹಿಸಿಕೊಳ್ಳುವಂತೆ ಹೇಳಿದೆ’ ಎಂದು ಗಂಗೂಲಿ ತಮಾಷೆ ಮಾಡಿದರು.
‘ನಾವು ಒಟ್ಟಿಗೆ ಬೆಳೆದಿದ್ದೇವೆ. ಒಂದೇ ಸಮಯದಲ್ಲೇ ಕ್ರಿಕೆಟ್ ಪ್ರಾರಂಭಿಸಿದ್ದೇವೆ. ಹೆಚ್ಚಿನ ಸಮಯವನ್ನು ಒಟ್ಟಿ ಕಳೆದಿದ್ದೇವೆ. ಹೀಗಾಗಿ ನಮ್ಮ ನಡುವೆ ಸಂವಹನ ಸುಲಭ’ ಎಂದು ಗಂಗೂಲಿ ಹೇಳಿದರು.
ಬಿಸಿಸಿಐ ಈ ತಿಂಗಳ ಆರಂಭದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ನವೆಂಬರ್ 17ರ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಪ್ರಾರಂಭಕ್ಕೂ ಮೊದಲು ದ್ರಾವಿಡ್ ತಮ್ಮ ಸಹಾಯಕ ಸಿಬ್ಬಂದಿಯೊಂದಿಗೆ ತಂಡವನ್ನು ಸೇರಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.