ನವದೆಹಲಿ: ಆಲ್ರೌಂಡರ್ ಜಯಂತ್ ಯಾದವ್, ಮುಂಬರುವ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಟೂರ್ನಿ ಡಿಸೆಂಬರ್ 2ರಿಂದ 17ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ. ಬಿಸಿಸಿಐ ಜೂನಿಯರ್ ಆಯ್ಕೆ ಸಮಿತಿ, ಭಾನುವಾರ ಒಟ್ಟು 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಯುವ ವಿಕೆಟ್ ಕೀಪರ್ ಪ್ರಬ್ ಸಿಮ್ರನ್ ಸಿಂಗ್ ಅವರೂ ತಂಡದಲ್ಲಿದ್ದಾರೆ.
28 ವರ್ಷ ವಯಸ್ಸಿನ ಜಯಂತ್, ಭಾರತದ ಪರ ನಾಲ್ಕು ಟೆಸ್ಟ್ ಮತ್ತು ಏಕೈಕ ಏಕದಿನ ಪಂದ್ಯ ಆಡಿದ ಅನುಭವ ಹೊಂದಿದ್ದಾರೆ. 2016ರ ಡಿಸೆಂಬರ್ನಲ್ಲಿ ಮುಂಬೈಯಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಟೆಸ್ಟ್ನಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು.
ಕರ್ನಾಟಕದ ಭರವಸೆಯ ಬೌಲರ್ ಪ್ರಸಿದ್ಧ ಎಂ.ಕೃಷ್ಣ ಅವರಿಗೂ ಅವಕಾಶ ಸಿಕ್ಕಿದೆ. ದೀಪಕ್ ಹೂಡಾ ಮತ್ತು ನಿತೀಶ್ ರಾಣಾ ಅವರೂ ಅವಕಾಶ ಪಡೆದಿದ್ದಾರೆ.
ತಂಡ: ಜಯಂತ್ ಯಾದವ್ (ನಾಯಕ), ಆರ್.ಡಿ.ಗಾಯಕವಾಡ್, ಅಥರ್ವ ತೈದೆ, ಅಂಕುಶ್ ಬೇನ್ಸ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಪ್ರಬ್ ಸಿಮ್ರನ್ ಸಿಂಗ್, ನಿತೀಶ್ ರಾಣಾ, ಹಿಮ್ಮತ್ ಸಿಂಗ್, ಶಂಶ್ ಮುಲಾನಿ, ಅಂಕಿತ್ ರಜಪೂತ್, ಪ್ರಸಿದ್ಧ ಕೃಷ್ಣ, ಸಿದ್ಧಾರ್ಥ್ ದೇಸಾಯಿ, ಮಯಂಕ್ ಮಾರ್ಕಂಡೆ, ಅತೀತ್ ಸೇಠ್ ಮತ್ತು ಶಿವಂ ಮಾವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.