ನವದೆಹಲಿ: ಭಾನುವಾರ ಇಲ್ಲಿ ನಡೆದ ದೆಹಲಿ ಮತ್ತು ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಸಂಸ್ಥೆಯ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿಎರಡು ಗುಂಪುಗಳ ನಡುವೆ ಹೊಡೆದಾಟ ನಡೆಯಿತು. ಇದರಿಂದಾಗಿ ಇಡೀ ಸಭೆಯು ರಣರಂಗವಾಗಿ ಮಾರ್ಪಟ್ಟಿತು.
ಸಭೆಯಲ್ಲಿ ಜಂಟಿ ಕಾರ್ಯದರ್ಶಿ ರಾಜನ್ ಮನಚಂದ ಮತ್ತು ಇನ್ನು ಕೆಲವು ಪದಾಧಿಕಾರಿಗಳ ನಡುವೆ ಆರಂಭವಾದ ಮಾತಿನ ಚಕಮಕಿಯು ಹೊಡೆದಾಟಕ್ಕೆ ತಿರುಗಿತು ಎನ್ನಲಾಗಿದೆ.
ಈ ಘಟನೆಯ ವಿಡಿಯೊ ಟ್ವೀಟ್ ಮಾಡಿರುವ ಸಂಸದ ಮತ್ತು ದೆಹಲಿಯ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್, ‘ಇಗೋ ನೋಡಿ, ಒಂದು ಪ್ರತಿಷ್ಠಿತ ಸಂಸ್ಥೆಯ ಘನತೆಯನ್ನು ಕೆಲವು ದುಷ್ಟರು ಮಣ್ಣುಪಾಲು ಮಾಡುತ್ತಿದ್ದಾರೆ. ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಅವರೇ ದಯವಿಟ್ಟು ಇತ್ತ ಗಮನ ಹರಿಸಿ. ಡಿಡಿಸಿಎ ಆಡಳಿತ ಮಂಡಳಿಯನ್ನು ಕೂಡಲೇ ವಿಸರ್ಜಿಸಿ’ ಎಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಿಡಿಸಿಎ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿರುವ ಪತ್ರದಲ್ಲಿ, ‘ತೀವ್ರ ಚಳಿಗಾಲದ ಭಾನುವಾರದ ಬೆಳಿಗ್ಗೆ ಸಭೆಗೆ ಹಾಜರಾದ ಎಲ್ಲ ಸದಸ್ಯರು, ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.