ADVERTISEMENT

ಐಸೊಲೇಷನ್‌ ನಲ್ಲಿರುವ ಆಟಗಾರರ ಪ್ರಯಾಣಕ್ಕೂ ಸಮ್ಮತಿ

ಮೆಲ್ಬರ್ನ್‌ನಿಂದ ಸಿಡ್ನಿಗೆ ಇಂದು ಪಯಣಿಸಲಿರುವ ಭಾರತ ತಂಡ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 14:33 IST
Last Updated 3 ಜನವರಿ 2021, 14:33 IST
ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ 
ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ    

ನವದೆಹಲಿ: ಕೋವಿಡ್ ತಡೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆನ್ನಲಾದ ಐವರು ಆಟಗಾರರೂ ಸೇರಿದಂತೆ ಭಾರತ ತಂಡದ ಎಲ್ಲ ಸದಸ್ಯರೂ ಜೊತೆಗೂಡಿ ಸೋಮವಾರ ಸಿಡ್ನಿಗೆ ತೆರಳಲಿದ್ದಾರೆ.

ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್, ನವದೀಪ್ ಸೈನಿ ಮತ್ತು ಪೃಥ್ವಿ ಶಾ ಅವರು ನವವರ್ಷಾಚರಣೆಯ ದಿನ ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ್ದರೆನ್ನಲಾಗಿದೆ. ಆದ್ದರಿಂದ ಈ ಐವರೂ ಆಟಗಾರರಿಗೆ ಪ್ರತ್ಯೇಕವಾಸ ಮಾಡಲು ಸೂಚಿಸಲಾಗಿದೆ. ಬಿಸಿಸಿಐ ಮತ್ತು ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಜಂಟಿ ತನಿಖೆ ಕೂಡ ನಡೆಯುತ್ತಿದೆ.

ಜ.7ರಿಂದ ಸಿಡ್ನಿಯಲ್ಲಿ ನಡೆಯುವ ಮೂರನೇ ಟೆಸ್ಟ್‌ ಪಂದ್ಯಕ್ಕೆ ಸೋಮವಾರ ತಂಡವು ತೆರಳಲಿದೆ.

ADVERTISEMENT

’ಈ ಪ್ರಕರಣದ ಕುರಿತು ಸಿಎ ಹೊರಡಿಸಿರುವ ಪ್ರಕಟಣೆಯನ್ನು ಕೂಲಂಕಷವಾಗಿ ನೋಡಿ. ಅದರಲ್ಲಿ ಎಲ್ಲಿಯೂ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿಲ್ಲ. ಒಂದೊಮ್ಮೆ ಉಲ್ಲಂಘನೆಯಾಗಿದ್ದರೆ ಮುಂದಿನ ಹಂತದ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದೆ. ಆದ್ದರಿಂದ ಐವರೂ ಆಟಗಾರರು ಸಿಡ್ನಿಗೆ ತೆರಳದಂತೆ ಯಾವುದೇ ನಿರ್ಬಂಧ ಕೂಡ ಇಲ್ಲ. ಸೋಮವಾರ ಇಡೀ ತಂಡವು ಸಿಡ್ನಿಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದೆ‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಕ್ರಿಕೆಟ್ ಆಸ್ಟ್ರೇಲಿಯಾವು ಸರಿಯಾದ ರೀತಿಯಲ್ಲಿ ನಿವರ್ಹಿಸಿಲ್ಲ ಎಂಬುದನ್ನು ಅಧಿಕಾರಿಯು ಪರೋಕ್ಷವಾಗಿ ಹೇಳುತ್ತಾರೆ.

’ಕ್ರಿಕೆಟ್ ಅಭಿಮಾನಿಯೊಬ್ಬರು ಆಟಗಾರರು ಹೋಟೆಲ್‌ನಲ್ಲಿ ಊಟ ಮಾಡುತ್ತಿರುವ ವಿಡಿಯೊ ಹಾಕಿದ್ದರು. ಅಲ್ಲದೇ ರಿಷಭ್ ಪಂತ್ ತಮ್ಮನ್ನು ಆಲಂಗಿಸಿಕೊಂಡಿದ್ದರು ಎಂದೂ ಬರೆದಿದ್ದರು. ನಂತರ ಅದನ್ನು ಅಲ್ಲಗಳೆದಿದ್ದರು. ಅವರು ಆ ರೀತಿ ಬರೆಯದೇ ಹೋಗಿದ್ದರೆ ಈ ಗೊಂದಲಗಳೇ ಆಗುತ್ತಿರಲಿಲ್ಲ. ಅಭಿಮಾನಿಯು ಆಟಗಾರರ ಅನುಮತಿಯಿಲ್ಲದೇ ವಿಡಿಯೊ ಚಿತ್ರಿಕರಣ ಮಾಡಿದ್ದಾರೆ. ದೃಶ್ಯತುಣುಕಿನೊಂದಿಗೆ ತಾವು ಪಾವತಿಸಿದ ಬಿಲ್ ಚಿತ್ರವನ್ನೂ ಅವರು ಹಾಕಿದ್ದಾರೆ‘ ಎಂದು ಬಿಸಿಸಿಐ ಅಧಿಕಾರಿ ಹೇಳಿದರು.

’ಪಂತ್ ತಮ್ಮನ್ನು ಆಲಂಗಿಸಿಕೊಂಡಿದ್ದಾರೆಂದು ಸುಳ್ಳು ಹೇಳಿದ ವ್ಯಕ್ತಿಯ ವಿಡಿಯೊವನ್ನು ನಂಬಿ ಸಿಎ ಕ್ರಮ ಕೈಗೊಳ್ಳಬೇಕೆಂದು ನೀವು ಬಯಸುತ್ತೀರಾ‘ ಎಂದು ಪ್ರಶ್ನಿಸಿದರು.

ಆಡಳಿತ ವ್ಯವಸ್ಥಾಪಕ ಮೇಲೆ ತೂಗುಗತ್ತಿ

ಐವರು ಆಟಗಾರರು ಒಳಾಂಗಣ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿರುವುದು ಶಿಷ್ಟಾಚಾರದ ಉಲ್ಲಂಘನೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಆದರೆ ಶಿಷ್ಟಾಚಾರಗಳ ಕುರಿತು ಆಟಗಾರರಿಗೆ ತಿಳಿವಳಿಕೆ ನೀಡಿ, ಮಾರ್ಗದರ್ಶನ ಮಾಡಬೇಕಿದ್ದ ಆಡಳಿತ ವ್ಯವಸ್ಥಾಪಕ ಗಿರೀಶ ಡೋಂಗ್ರೆ ಕರ್ತವ್ಯಲೋಪದ ಕುರಿತು ಈಗ ಚರ್ಚೆ ನಡೆಯುತ್ತಿದೆ.

’ಶಿಷ್ಟಾಚಾರದ ಪ್ರತಿಯನ್ನು ಆಟಗಾರರು ಸದಾ ತಮ್ಮ ಬಳಿ ಇಟ್ಟುಕೊಂಡು ಓಡಾಡಬೇಕಿಲ್ಲ. ಅದರಲ್ಲಿ ಬರೆದಿರುವ ಎಲ್ಲ ಸಾಲುಗಳನ್ನೂ ಸದಾ ನೆನಪಿಟ್ಟುಕೊಳ್ಳಲೂ ಬೇಕಿಲ್ಲ. ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಲು ವೃತ್ತಿಪರ ಸಿಬ್ಬಂದಿ ಇದೆ. ಗಿರೀಶ ಡೋಂಗ್ರೆ ಅವರ ಹೊಣೆಯಾಗಿದೆ. ಆಟಗಾರರು ನಿಯಮ ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರದ್ದು. ಆಟಗಾರರು ಒಳಾಂಗಣದೊಳಗೆ ಪ್ರವೇಶಿಸದಂತೆ ಸೂಚಿಸುವ ಹೊಣೆ ಅವರದ್ದೇ ಆಗಿತ್ತು‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.