ಕೋಲ್ಕತ್ತ: ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಪುತ್ರ, ಹಾಕಿಪಟು ಅಶೋಕ್ ಕುಮಾರ್ ಅವರು ಮೋಹನ್ ಬಾಗನ್ ಫುಟ್ ಬಾಲ್ ಕ್ಲಬ್ ನೀಡುವ ಜೀವಮಾನಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕೋವಿಡ್ –19 ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸರಳವಾಗಿ ಆಯೋಜಿಸಲಾಗುವುದು ಎಂದು ಕ್ಲಬ್ ತಿಳಿಸಿದೆ.
‘ಕಾರ್ಯಕ್ರಮವನ್ನು ಚಿತ್ರೀಕರಿಸಲಾಗುವುದು. ಪ್ರಶಸ್ತಿ ಪುರಸ್ಕೃತರು ಮತ್ತು ಅತಿಥಿಗಳ ಸಂದೇಶವನ್ನೂ ಅದರಲ್ಲಿ ಸೇರಿಸಲಾಗುವುದು. ನಂತರ ನಮ್ಮ ಸಾಮಾಜಿಕ ತಾಣಗಳಲ್ಲಿ ಪ್ರಸಾರ ಮಾಡಲಾಗುವುದು’ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಶೃಂಜಯ್ ಬೋಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1975ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ ಹಾಕಿ ತಂಡದಲ್ಲಿ ಅಶೋಕ್ ಕುಮಾರ್ ಆಡಿದ್ದರು. ತಂಡವು ಚಾಂಪಿಯನ್ ಆಗುವಲ್ಲಿ ಅವರು ಮಹತ್ವದ ಕಾಣಿಕೆ ನೀಡಿದ್ದರು.
ಪ್ರತಿ ವರ್ಷ ಜುಲೈ 29ರಂದು ಮೋಹನ್ ಬಾಗನ್ ದಿನಾಚರಣೆ ನಡೆಯುತ್ತದೆ. 1911ರಲ್ಲಿ ಐಎಫ್ ಎ ಪ್ರಶಸ್ತಿ ಗಳಿಸಿದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಈಸ್ಟ್ ಯಾರ್ಕ್ ಶೈರ್ ತಂಡವನ್ನು 2-1ರಿಂದ ಮಣಿಸಿ ಮೋಹನ್ ಬಾಗನ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಈ ಮೂಲಕ ಟೂರ್ನಿಯಲ್ಲಿ ಬ್ರಿಟಿಷ್ ಆಧಿಪತ್ಯವನ್ನು ಕೊನೆಗೊಳಿಸಿದ ಭಾರತದ ಮೊದಲ ಕ್ಲಬ್ ಎಂದೆನಿಸಿಕೊಂಡಿತ್ತು.
‘ಈ ವರ್ಷ ಪರಿಸ್ಥಿತಿ ಬಿಗಡಾಯಿಸಿದೆ. ಆದ್ದರಿಂದ ಸಂಭ್ರಮಾಚರಣೆ ಮಾಡದೇ ಇರಲು ನಿರ್ಧರಿಸಲಾಗಿದೆ. ಕೋಲ್ಕತ್ತದಲ್ಲೇ ಇರುವವರಿಗೆ ಪ್ರಶಸ್ತಿಯನ್ನು ನೇರವಾಗಿ ಪ್ರದಾನ ಮಾಡಲಾಗುವುದು. ಉಳಿದವರಿಗೆ ಪರಿಸ್ಥಿತಿ ಸುಧಾರಿಸಿದ ನಂತರ ಪ್ರದಾನ ಮಾಡಲಾಗುವುದು’ ಎಂದು ದಾಸ್ ತಿಳಿಸಿದರು.
ಈ ಬಾರಿಯ ಮೋಹನ್ ಬಾಗನ್ ರತ್ನ ಪ್ರಶಸ್ತಿಗೆ ಹಾಕಿಪಟು ಗುರುಭಕ್ಷ್ ಸಿಂಗ್ ಮತ್ತು ಕ್ರಿಕೆಟಿಗ ಪಲಶ್ ನಂದಿ ಆಯ್ಕೆಯಾಗಿದ್ದಾರೆ. ಜೀವಮಾನ ಸಾಧನೆ ಪ್ರಶಸ್ತಿಗೆ ಅಶೋಕ್ ಕುಮಾರ್ ಅವರೊಂದಿಗೆ ಫುಟ್ ಬಾಲ್ ಆಟಗಾರ ಪ್ರಣಬ್ ಗಂಗೂಲಿ, ಅಥ್ಲೀಟ್ ಮನೋರಂಜನ್ ಪೊರೆಲ್ ಆಯ್ಕೆಯಾಗಿದ್ದಾರೆ. ಉತ್ತಮ ಫುಟ್ ಬಾಲ್ ಆಟಗಾರ ಪ್ರಶಸ್ತಿಗೆ ಜೊಸೆಬಾ ಬೇಟಿಯಾ ಸೀನಿಯರ್, ಉತ್ತಮ ಯುವಆಟಗಾರ ಪ್ರಶಸ್ತಿಗೆ ಸಜಲ್ ಬಾಗ್ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.