ಡೇವಿಡ್ ವಾರ್ನರ್
ಬೆಂಗಳೂರು: ಅಹಮಾದಾಬಾದ್ ವಿಮಾನ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್, ಇನ್ನು ಮುಂದೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದ ಶಪಥ ಮಾಡಿದ್ದಾರೆ.
ಗುರುವಾರ(ಜೂ. 12) ಮಧ್ಯಾಹ್ನ 1.39ರ ಸುಮಾರಿಗೆ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ದುರಂತದಲ್ಲಿ ಕನಿಷ್ಠ 265ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ವಾರ್ನರ್, ವಿಮಾನದಲ್ಲಿನ ಸಮಸ್ಯೆಗಳ ಬಗ್ಗೆ ಪೈಲಟ್ಗಳು, ಎಂಜಿನಿಯರ್ಗಳು ಮತ್ತು ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದರು. ಅದರ ಬಗ್ಗೆ ಕಂಪನಿಯ ಆಡಳಿತ ಮಂಡಳಿಯ ಗಮನಕ್ಕೂ ತಂದಿದ್ದರು. ಆದರೂ ನಿರ್ಲಕ್ಷ್ಯಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತ ಏರ್ ಇಂಡಿಯಾ ಕಂಪನಿಯ ಮಾಜಿ ಉದ್ಯೋಗಿ ವಿವೇಕ್ ಎಂಬುವವರ ಹಳೆಯ ಪೋಸ್ಟ್ವೊಂದನ್ನು ವಾರ್ನರ್ ಮರು ಹಂಚಿಕೊಂಡಿದ್ದಾರೆ.
‘ಇನ್ನು ಮುಂದೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ’ ಎಂದು ತಿಳಿಸಿದ್ದಾರೆ.
ಈ ಮೊದಲು ಗಂಟೆಗಟ್ಟಲೇ ವಿಮಾನದಲ್ಲಿ ಕಾಯಿಸಿದ್ದಕ್ಕಾಗಿ ಏರ್ ಇಂಡಿಯಾದ ವಿರುದ್ಧ ವಾರ್ನರ್ ಗರಂ ಆಗಿದ್ದರು. ‘ಪೈಲಟ್ಗಳಿಲ್ಲದ ವಿಮಾನವನ್ನು ನಾವು ಹತ್ತಿದ್ದೇವೆ. ಪೈಲಟ್ಗಳು ಇಲ್ಲದಿದ್ದರೆ ವಿಮಾನಕ್ಕೆ ಪ್ರಯಾಣಿಕರನ್ನು ನೀವು ಏಕೆ ಹತ್ತಿಸುತ್ತೀರಿ’ ಎಂದು ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.