ದುಬೈ: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಣ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಧಾರಣಕ್ಕಿಂತ ಕೆಳದರ್ಜೆಯಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರೇಟಿಂಗ್ ನೀಡಿದೆ.
ಇದರಿಂದಾಗಿ ಕ್ರೀಡಾಂಗಣವು ಐಸಿಸಿ ಪಿಚ್ ಮತ್ತು ಔಟ್ಫೀಲ್ಡ್ ಮಾನಿಟರಿಂಗ್ ಪ್ರೊಸೆಸ್ ನಿಯಮದಡಿಯಲ್ಲಿ ಒಂದು ಡಿಮೆರಿಟ್ ಅಂಕ ಪಡೆದಿದೆ. ಯಾವುದೇ ಕ್ರೀಡಾಂಗಣದ ಡಿಮೆರಿಟ್ ಅಂಕವು ಐದು ವರ್ಷಗಳ ಅವಧಿಯಲ್ಲಿ ಐದಕ್ಕೇರಿದರೆ 12 ತಿಂಗಳವರೆಗೆ ಮತ್ತು ಹತ್ತಕ್ಕೇರಿದರೆ ಎರಡು ವರ್ಷ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸದಂತೆ ನಿರ್ಬಂಧ ಹೇರಲಾಗುತ್ತದೆ. ಈ ನಿಯಮವು 2018ರ ಜನವರಿ 4ರಿಂದ ಜಾರಿಗೆ ಬಂದಿದೆ.
ಮಾರ್ಚ್ 12ರಂದು ಆರಂಭವಾಗಿದ್ದ ಪಂದ್ಯವು ಮೂರನೇ ದಿನವೇ ಮುಕ್ತಾಯವಾಗಿತ್ತು. ಭಾರತ ತಂಡವು 238 ರನ್ಗಳ ಅಂತರದಿಂದ ಜಯಿಸಿತ್ತು.
‘ಪಂದ್ಯದ ಮೊದಲ ದಿನವೇ ಪಿಚ್ನಲ್ಲಿ ಚೆಂಡು ತಿರುವು ಪಡೆಯುತ್ತಿತ್ತು. ಪ್ರತಿಯೊಂದು ಅವಧಿಯಿಂದ ಅವಧಿಯವರೆಗೆ ಸ್ಥಿತಿ ಸುಧಾರಣೆ ಆಯಿತಾದರೂ ಬ್ಯಾಟ್ ಮತ್ತು ಚೆಂಡಿನ ನಡುವೆ ಉತ್ತಮ ಸ್ಪರ್ಧೆ ನಡೆಯುವಂತಿರಲಿಲ್ಲ’ ಎಂದು ಪಿಂಕ್ ಬಾಲ್ ಟೆಸ್ಟ್ಗೆ ಐಸಿಸಿ ರೆಫರಿಯಾಗಿದ್ದ ಜಾವಗಲ್ ಶ್ರೀನಾಥ್ ವರದಿ ನೀಡಿದ್ದಾರೆ.
ಶ್ರೀನಾಥ್ ವರದಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೂ ಕಳುಹಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2017ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ನಡೆದಾಗಲೂ ಐಸಿಸಿಯು ಕಳಪೆ ರೇಟಿಂಗ್ ನೀಡಿತ್ತು. ಆಗ ಪಂದ್ಯ ಕ್ರಿಸ್ ಬ್ರಾಡ್ ಪಂದ್ಯದ ರೆಫರಿಯಾಗಿದ್ದರು.
ಪಂದ್ಯದ ಮೊದಲ ದಿನವೇ ಒಟ್ಟು 16 ವಿಕೆಟ್ಗಳು ಪತನವಾಗಿದ್ದವು. ಎರಡನೇ ದಿನದಾಟದಲ್ಲಿ 14 ಮತ್ತು ಮೂರನೇ ದಿನ 9 ವಿಕೆಟ್ಗಳು ಪತನವಾಗಿದ್ದವು.
ಭಾರತ ತಂಡವು 2–0ಯಿಂದ ಸರಣಿಯಲ್ಲಿ ಜಯಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.