ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ತಂಡವು ನಮೀಬಿಯಾ ವಿರುದ್ಧ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
ಈ ಮೂಲಕ ಟ್ವೆಂಟಿ-20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗೆಲುವಿನ ವಿದಾಯ ಹಾಡಿದ್ದಾರೆ. ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಅರುಣ್ ಭರತ್ ಹಾಗೂ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಪಾಲಿಗೂ ಇದು ವಿದಾಯದ ಪಂದ್ಯವಾಗಿತ್ತು.
ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿರುವ ಭಾರತ ತಂಡವು ಸತತ ಮೂರನೇ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದೆ. ಆ ಮೂಲಕ ಐದು ಪಂದ್ಯಗಳಲ್ಲಿ ಒಟ್ಟು ಆರು ಅಂಕಗಳನ್ನು ಕಲೆ ಹಾಕಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದು ಭಾರತದ ವಿಶ್ವಕಪ್ ಕನಸು ಭಗ್ನಗೊಳ್ಳಲು ಕಾರಣವಾಗಿದೆ.
ರವೀಂದ್ರ ಜಡೇಜ (16ಕ್ಕೆ 3) ಹಾಗೂ ಆರ್. ಅಶ್ವಿನ್ (20ಕ್ಕೆ 3) ಸ್ಪಿನ್ ಮೋಡಿಗೆ ಸಿಲುಕಿರುವ ನಮೀಬಿಯಾ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಬಳಿಕ ಗುರಿ ಬೆನ್ನತ್ತಿದ ಭಾರತ 15.2 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ರೋಹಿತ್ ಶರ್ಮಾ (56) ಹಾಗೂ ಕೆ.ಎಲ್. ರಾಹುಲ್ (54*) ಆಕರ್ಷಕ ಅರ್ಧಶತಕ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ಐದು ಓವರ್ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿದೆ. ರೋಹಿತ್ ಶರ್ಮಾ (37*) ಹಾಗೂ ಕೆ.ಎಲ್. ರಾಹುಲ್ (7*) ಕ್ರೀಸಿನಲ್ಲಿದ್ದಾರೆ.
ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆಯುತ್ತಿರುವ ಸೂಪರ್-12 ಹಂತದ ಎರಡನೇ ಗುಂಪಿನ ಅಂತಿಮ ಪಂದ್ಯದಲ್ಲಿ ರವೀಂದ್ರ ಜಡೇಜ (16ಕ್ಕೆ 3) ಹಾಗೂ ಆರ್. ಅಶ್ವಿನ್ (20ಕ್ಕೆ 3) ಸ್ಪಿನ್ ದಾಳಿಗೆ ಸಿಲುಕಿರುವ ನಮೀಬಿಯಾ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ನಮೀಬಿಯಾ ಪರ ಡೇವಿಡ್ ವೀಸ್ ಗರಿಷ್ಠ 26 ರನ್ ಗಳಿಸಿದರು. ಸ್ಟೀಫನ್ ಬಾರ್ಡ್ (21), ಮೈಕೆಲ್ ವಾನ್ ಲಿಂಗೆನ್ (14), ಜಾನ್ ಫ್ರಿಲಿಂಕ್ (15*) ಹಾಗೂ ರುಬೆನ್ ಟ್ರಂಪಲ್ಮ್ಯಾನ್ (13*) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.
ಭಾರತದ ಪರ ಜಡೇಜ ಹಾಗೂ ಅಶ್ವಿನ್ ತಲಾ ಮೂರು ಮತ್ತು ಜಸ್ಪ್ರೀತ್ ಬೂಮ್ರಾ ಎರಡು ವಿಕೆಟ್ಗಳನ್ನು ಕಬಳಿಸಿದರು.
10 ಓವರ್ ಅಂತ್ಯಕ್ಕೆ ನಮೀಬಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದೆ. ನಮೀಬಿಯಾ ಆರಂಭಿಕರ ಪತನದ ಬಳಿಕ ಭಾರತೀಯ ಬೌಲರ್ಗಳು ಹಿಡಿತ ಸಾಧಿಸಿದ್ದಾರೆ. ರವೀಂದ್ರ ಜಡೇಜ ಎರಡು ವಿಕೆಟ್ ಕಬಳಿಸಿದ್ದಾರೆ.
ಪವರ್ ಪ್ಲೇ ಅಂತ್ಯಕ್ಕೆ ನಮೀಬಿಯಾ ಎರಡು ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದೆ. ರವೀಂದ್ರ ಜಡೇಜ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ ಒಂದು ವಿಕೆಟನ್ನು ಹಂಚಿದ್ದಾರೆ.
ಭಾರತ ತಂಡದಲ್ಲಿ ಒಂದು ಬದಲಾವಣೆ ತರಲಾಗಿದ್ದು, ವರುಣ್ ಚಕ್ರವರ್ತಿ ಸ್ಥಾನಕ್ಕೆ ರಾಹುಲ್ ಚಾಹರ್ ಅವರನ್ನು ಆಯ್ಕೆ ಮಾಡಲಾಗಿದೆ.
ನಮೀಬಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.