ಸಿಡ್ನಿ: ಭಾರತ ಕ್ರಿಕೆಟ್ ತಂಡದ ಆಟಗಾರರು ಸೇರಿದಂತೆ ಎಲ್ಲ ಸಹಾಯಕ ಸಿಬ್ಬಂದಿಗಳಿಗೆ ನಡೆಸಲಾದ ಕೋವಿಡ್-19 ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಎಲ್ಲರೂ ನೆಗೆಟಿವ್ ಫಲಿತಾಂಶ ದಾಖಲಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ತಿಳಿಸಿದೆ.
ಇದರೊಂದಿಗೆ ಟೀಮ್ ಇಂಡಿಯಾ ಆಟಗಾರರ ಬಗ್ಗೆ ಎದ್ದಿರುವ ಬಹುದೊಡ್ಡ ಆತಂಕ ದೂರವಾಗಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ.
ಹೊಸ ವರ್ಷಾಚರಣೆಯ ಆಚರಣೆಯ ವೇಳೆ ಮೆಲ್ಬರ್ನ್ ರೆಸ್ಟೋರೆಂಟ್ನಲ್ಲಿ ಭಾರತ ಕ್ರಿಕೆಟ್ ತಂಡದ ಕೆಲವು ಆಟಗಾರರು ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಇದರಿಂದಾಗಿ ರೋಹಿತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್, ನವದೀಪ್ ಸೈನಿ ಮತ್ತು ಪೃಥ್ವಿ ಶಾ ಅವರಿಗೆ ಪ್ರತ್ಯೇಕವಾಸ ಇರಲು ಸೂಚಿಸಲಾಗಿತ್ತು.
ಜನವರಿ 3ರಂದು ಟೀಮ್ ಇಂಡಿಯಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಈಗ ಎಲ್ಲರೂ ಜೊತೆಯಾಗಿ ಜನವರಿ 4ರಂದು ಸಿಡ್ನಿಗೆ ಪ್ರಯಾಣಿಸಲಿದ್ದಾರೆ. ಆಸ್ಟ್ರೇಲಿಯಾ ಆಟಗಾರರು ಸಹ ಸೋಮವಾರದಂದೇ ಸಿಡ್ನಿಯನ್ನು ಪ್ರವೇಶಿಸಲಿದೆ.
ಇದನ್ನೂ ಓದಿ:ಐಸೊಲೇಷನ್ ನಲ್ಲಿರುವ ಆಟಗಾರರ ಪ್ರಯಾಣಕ್ಕೂ ಸಮ್ಮತಿ
ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 7ರಂದು ಆರಂಭವಾಗಲಿದೆ. ಅಡಿಲೇಡ್ ಓವಲ್ನಲ್ಲಿ ನಡೆದ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಕೇವಲ 36 ರನ್ನಿಗೆ ಆಲೌಟಾಗಿದ್ದ ಭಾರತ ಹೀನಾಯ ಸೋಲಿಗೆ ಗುರಿಯಾಗಿದ್ದರೆ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿ ತಿರುಗೇಟು ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.