ಕರುಣ್ ನಾಯರ್
(ಪಿಟಿಐ ಚಿತ್ರ)
ಲೀಡ್ಸ್: 'ಡ್ರೆಸ್ಸಿಂಗ್ ಕೊಠಡಿಯಲ್ಲಿ ಬಾಲ್ಯದ ಗೆಳೆಯರಾದ ಕೆ.ಎಲ್. ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ಅವರ ಉಪಸ್ಥಿತಿ ಇರುವುದರಿಂದ ಹೆಚ್ಚು ಆರಾಮದಾಯಕವೆನಿಸುತ್ತದೆ' ಎಂದು ಎಂಟು ವರ್ಷಗಳ ಬಳಿಕ ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪುನರಾಯ್ಕೆ ಆಗಿರುವ ಕರುಣ್ ನಾಯರ್ ತಿಳಿಸಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕರುಣ್ ನಾಯರ್, ಇಂಗ್ಲೆಂಡ್ ಪ್ರವಾಸದಲ್ಲಿನ ಭಾರತ ತಂಡಕ್ಕೆ ಪುನರಾಯ್ಕೆ ಆಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು ಲೀಡ್ಸ್ನಲ್ಲಿ ಆರಂಭವಾಗಿದೆ. ರಾಹುಲ್ ಹಾಗೂ ಪ್ರಸಿದ್ಧ ಜೊತೆ ಕರುಣ್ ನಾಯರ್ ಸಹ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಇರಾದೆಯನ್ನು ಕರುಣ್ ವ್ಯಕ್ತಪಡಿಸಿದ್ದಾರೆ.
'ವಿಷಯಗಳನ್ನು ಸರಳವಾಗಿಡಲು ಯತ್ನಿಸಲಿದ್ದೇನೆ. ನಾನೀಗ ಹೆಚ್ಚು ಶಾಂತಚಿತ್ತನಾಗಿದ್ದು, ಧನಾತ್ಮಕ ಚಿಂತನೆಯೊಂದಿಗೆ ಆಡಲಿದ್ದೇನೆ' ಎಂದು ತಿಳಿಸಿದ್ದಾರೆ.
ರಾಹುಲ್ ಹಾಗೂ ಪ್ರಸಿದ್ಧ ಜೊತೆ ಆಡುವುದು ಸಮಾಧಾನಕರ ಅಂಶವಾಗಿದೆ. ಚಿಕ್ಕವನಿಂದಲೇ ಒಟ್ಟಿಗೆ ಹಲವು ವರ್ಷಗಳಿಂದ ಜೊತೆಯಾಗಿ ಆಡುತ್ತಿದ್ದೇವೆ ಎಂದು ಬಿಸಿಸಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ನನ್ನ ಪಾಲಿಗೆ ಬದುಕು ಪೂರ್ಣ ವರ್ತುಲವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಿಂದಲೇ ನನ್ನನ್ನು ಕೈಬಿಡಲಾಗಿತ್ತು. ಈಗ ಇಂಗ್ಲೆಂಡ್ ವಿರುದ್ಧವೇ ತಂಡವನ್ನು ಸೇರಿಕೊಂಡಿದ್ದೇನೆ' ಎಂದು 2017ರಲ್ಲಿ ತಂಡದಿಂದ ಹೊರದಬ್ಬಲ್ಪಟ್ಟಿದ್ದ ಕರುಣ್ ನಾಯರ್ ಪ್ರತಿಕ್ರಿಯಿಸಿದ್ದಾರೆ.
'ತಂಡದಿಂದ ಕೈಬಿಟ್ಟಾಗ ಭಾರತದ ಪರ ಮತ್ತೆ ಟೆಸ್ಟ್ ಕ್ರಿಕೆಟ್ ಆಡಬೇಕು ಎಂಬುದು ನನ್ನ ಗುರಿಯಾಗಿತ್ತು. ಅದುವೇ ಪ್ರತಿ ದಿನ ಕಠಿಣವಾಗಿ ಅಭ್ಯಾಸ ನಡೆಸಲು ನನಗೆ ಪ್ರೇರಣೆಯಾಗಿತ್ತು' ಎಂದಿದ್ದಾರೆ.
2024-25ರ ದೇಶೀಯ ಕ್ರಿಕೆಟ್ನಲ್ಲಿ ಕರುಣ್, 54ರ ಸರಾಸರಿಯಲ್ಲಿ 863 ರನ್ ಗಳಿಸಿದ್ದರು. ಅಲ್ಲದೆ ವಿದರ್ಭ ತಂಡವು ಮೂರನೇ ಸಲ ರಣಜಿ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.