ರಾಯಪುರ: ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ (18ಕ್ಕೆ 3 ವಿಕೆಟ್) ಸೇರಿದಂತೆ ಭಾರತೀಯ ಬೌಲರ್ಗಳ ಸಾಂಘಿಕ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ ಇಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ 34.3 ಓವರ್ಗಳಲ್ಲಿ 108 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ.
ಇದರೊಂದಿಗೆ ಸರಣಿ ಗೆಲ್ಲಲು ಭಾರತ 109 ರನ್ಗಳ ಸುಲಭ ಗುರಿ ಪಡೆದಿದೆ.
ರಾಯಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಆರಂಭದಲ್ಲೇ ಭಾರತೀಯ ವೇಗಿಗಳು ಎದುರಾಳಿಗಳಿಗೆ ಬಲವಾದ ಪೆಟ್ಟು ನೀಡಿದರು. ಪರಿಣಾಮ 15ಕ್ಕೆ ಐದು ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಫಿನ್ ಅಲೆನ್ (0), ಡೆವೊನ್ ಕಾನ್ವೇ (7), ಹೆನ್ರಿ ನಿಕೋಲಸ್ (2), ಡೆರಿಲ್ ಮಿಚೆಲ್ (1), ಟಾಮ್ ಲೆಥಮ್ (1) ನಿರಾಸೆ ಮೂಡಿಸಿದರು.
ಕೆಳ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ (36), ಮೈಕಲ್ ಬ್ರೇಸ್ವೆಲ್ (22) ಮತ್ತು ಮಿಚೆಲ್ ಸ್ಯಾಂಟ್ನರ್ (27) ಸ್ಪಲ್ವ ಹೊತ್ತು ಪ್ರತಿರೋಧ ಒಡ್ಡಿದರು. ಇನ್ನುಳಿದಂತೆ ಹೆನ್ರಿ ಶಿಪ್ಲೆ (2*), ಲಾಕಿ ಫರ್ಗ್ಯೂಸನ್ (1), ಬ್ಲೇರ್ ಟಿಕ್ನರ್ (2) ರನ್ ಗಳಿಸಿದರು.
ಭಾರತದ ಪರ ಶಮಿ ಮೂರು, ವಾಷಿಂಗ್ಟನ್ ಸುಂದರ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ಮತ್ತು ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಗಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.