ಹ್ಯಾಮಿಲ್ಟನ್: ನಮ್ಮ ಕಾಲದ ತಂಡಕ್ಕೆ ಹೋಲಿಸಿದರೆ ಈಗಿನ ತಂಡ ಪ್ರಬಲ ಮತ್ತು ಸದೃಡವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ ರಾಥೋರ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಬಳಿಕ ರಾಥೋರ್ ತಂಡದ ಬಗ್ಗೆ ಮಾತನಾಡಿದ್ದಾರೆ. ‘ಇದು ಮನಸ್ಥಿತಿ ಮತ್ತು ಆಟದ ತಂತ್ರಗಾರಿಕೆಯ ವಿಚಾರ. ಒಬ್ಬ ತರಬೇತುದಾರನಾಗಿ ನಾನು ಆಟಗಾರರಿಗೆ ಹೇಳಬೇಕಾಗಿರುವುದು ಏನೂ ಇಲ್ಲ ಎನಿಸುತ್ತದೆ. ತಮ್ಮ ಪಾಡಿಗೆ ಆಡುತ್ತಿದ್ದಾರೆ. ನಮ್ಮ ತಲೆಮಾರಿನ ಆಟಗಾರರಿಗಿಂತ ಇವರು ಪ್ರಬಲ ಮತ್ತು ಸದೃಢರಾಗಿದ್ದಾರೆ. ನೀವು ನೋಡಬಹುದು, ದೊಡ್ಡದೊಡ್ಡ ಸಿಕ್ಸರ್ಗಳನ್ನು ಆರಾಮವಾಗಿ ಬಾರಿಸುತ್ತಾರೆ. ಆ ಮಟ್ಟಿಗೆ ಆಟವೂ ಬದಲಾಗಿದೆ’ ಎಂದು ಅಭಿಪ್ರಾಯಟ್ಟಿದ್ದಾರೆ.
ಮೊದಲೆರಡು ಪಂದ್ಯಗಳು ಆಕ್ಲೆಂಡ್ನಲ್ಲಿ ನಡೆದಿದ್ದವು. ಅವುಗಳನ್ನು ಭಾರತ ಕ್ರಮವಾಗಿ 6 ಮತ್ತು 7 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯ ಹ್ಯಾಮಿಲ್ಟನ್ನಲ್ಲಿ ನಾಳೆ ನಡೆಯಲಿದೆ.
‘ಆಕ್ಲೆಂಡ್ನ ಈಡನ್ ಪಾರ್ಕ್ಗಿಂತ, ಇಲ್ಲಿನ ಸೆಡನ್ ಪಾರ್ಕ್ ದೊಡ್ಡದು. ಆದಾಗ್ಯೂ ನಾವು ಎಂದಿನಂತೆ ಆಡಬೇಕಿದೆ. ಯಾವುದೇ ಮಾರ್ಪಾಡುಗಳ ಬಗ್ಗೆ ನಾನು ಯೋಚಿಸಿಲ್ಲ’
‘ಆಸ್ಟ್ರೇಲಿಯಾದಂತ ದೊಡ್ಡ ಅಂಗಳಗಳಲ್ಲಾದರೆ, ವಿಕೆಟ್ ಅನ್ನು ಗಮನವಿರಿಸಿ ಯೋಜನೆ ರೂಪಿಸಬೇಕಾಗುತ್ತದೆ. ಒಂದು ಉತ್ತಮ ಯೋಜನೆಯು ಸಂದರ್ಭ, ವಾತಾವರಣಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದನ್ನು ಆಧರಿಸಿ ಇರಬೇಕು. ಒಂದು ವೇಳೆ ನಾವು ದೊಡ್ಡ ಅಂಗಳಗಳಲ್ಲಿ ಆಡುತ್ತೇವೆ ಎಂದಾದರೆ, ಎರಡು ಮತ್ತು ಮೂರು ರನ್ಗಾಗಿ ಓಡುವುದು ತನ್ನಿಂತಾನೆ ರೂಢಿಯಾಗುತ್ತದೆ. ಅದಕ್ಕನುಗುಣವಾಗಿ ಆಟವನ್ನು ಹೊಂದಿಸಿಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.