ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಉಳಿದೆರಡು ಪಂದ್ಯಗಳಿಗೆಭಾರತ ತಂಡವನ್ನು ಆಯ್ಕೆಗಾರರು ಬುಧವಾರ ಪ್ರಕಟಿಸಿದ್ದಾರೆ. ಟೆಸ್ಟ್ ಪಂದ್ಯಕ್ಕೆ ಮೊದಲು ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದಲ್ಲಿ ಮಾತ್ರ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗುವುದು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ಮೊದಲ ಎರಡು ಟೆಸ್ಟ್ಗೆ ಪ್ರಕಟಿಸಲಾಗಿದ್ದ ತಂಡದಲ್ಲಿದ್ದ 18 ಮಂದಿಯಲ್ಲಿ 17 ಮಂದಿಯನ್ನು ಉಳಿಸಿಕೊಳ್ಳಲಾಗಿದೆ.
ಅಹಮದಾಬಾದ್ನ ಹಗಲು ರಾತ್ರಿ ಪಂದ್ಯಕ್ಕೆ ಶಾರ್ದೂಲ್ ಠಾಕೂರ್ ಅವರ ಸ್ಥಾನಕ್ಕೆ ಉಮೇಶ್ ಯಾದವ್ ಅವರು ಸೇರ್ಪಡೆಯಾಗುವರೊ ಎಂಬುದು ಫಿಟ್ನೆಸ್ ಪರೀಕ್ಷೆಯ ಫಲಿತಾಂಶ ಅವಲಂಬಿಸಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ತಿಳಿಸಿದರು.
ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಹಾಗೂ ಕೀಪರ್–ಬ್ಯಾಟ್ಸ್ಮನ್ ಕೆ.ಎಸ್, ಭರತ್ ಅವರನ್ನು ಸ್ಟ್ಯಾಂಡ್ಬೈ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.
ಐದು ದಿನಗಳ ಪಂದ್ಯಕ್ಕೆ ಆಡಲು ಇನ್ನೂ ಪೂರ್ಣರೀತಿಯಲ್ಲಿ ಫಿಟ್ನೆಸ್ ಪಡೆಯದ ಕಾರಣ ಹಿರಿಯ ವೇಗಿ ಮೊಹಮದ್ ಶಮಿ ಅವರನ್ನು ಪರಿಗಣಿಸಲಿಲ್ಲ ಎಂದು ತಿಳಿದುಬಂದಿದೆ.
ತಂಡ ಹೀಗಿದೆ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರೆಹಾನೆ (ಉಪನಾಯಕ), ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್. ಅಶ್ವಿನ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್. ಸ್ಟ್ಯಾಂಡ್ಬೈ ಆಟಗಾರರು: ರಾಹುಲ್ ಚಾಹರ್ ಹಾಗೂ ಕೆಎಸ್ ಭರತ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.