ADVERTISEMENT

ಪಾಕಿಸ್ತಾನದ ನೆಲದಲ್ಲಿ ಪಾಕಿಸ್ತಾನವನ್ನೇ ಸೋಲಿಸುವ ತಂಡ ಕಟ್ಟಿದ್ದು ಗಂಗೂಲಿ:ಅಖ್ತರ್

ಏಜೆನ್ಸೀಸ್
Published 16 ಅಕ್ಟೋಬರ್ 2019, 20:31 IST
Last Updated 16 ಅಕ್ಟೋಬರ್ 2019, 20:31 IST
   

ನವದೆಹಲಿ: ಸೌರವ್‌ ಗಂಗೂಲಿ ನಾಯಕರಾಗುವುದಕ್ಕೂ ಮೊದಲಿನ ಭಾರತ ತಂಡಕ್ಕೆ ಪಾಕಿಸ್ತಾನದ ವಿರುದ್ಧ ಗೆಲ್ಲಬೇಕೆಂಬ ಮನಸ್ಥಿತಿಯೇ ಇರಲಿಲ್ಲ. ಆದರೆ ಪಾಕಿಸ್ತಾನವನ್ನು ಸೋಲಿಸುವಂಥ ತಂಡ ಕಟ್ಟಿದ್ದು ಗಂಗೂಲಿ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಬೌಲರ್‌ ಶೋಯಬ್‌ ಅಖ್ತರ್‌ ಹೇಳಿದ್ದಾರೆ.

ತಮ್ಮ ಯುಟ್ಯೂಬ್‌ ಚಾನಲ್‌ನಲ್ಲಿ ಬುಧವಾರ ವಿಡಿಯೊ ಅಪ್ಲೋಡ್‌ ಮಾಡಿರುವ ಶೋಯಬ್‌ ಅಖ್ತರ್‌, ಗಂಗೂಲಿ ಅವರ ಬಗ್ಗೆ ಹಾಡಿ ಹೊಗಳಿದ್ದಾರೆ.

‘ಗಂಗೂಲಿ ಅವರೊಂದಿಗೆ ನಾನು ಕ್ರೀಡಾಂಗಣದ ಒಳ–ಹೊರಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಐಪಿಎಲ್‌ನ ಕೋಲ್ಕತ್ತಾ ತಂಡದಲ್ಲಿ ನನಗೆ ಅವರು ನಾಯಕರಾಗಿದ್ದರು. ಭಾರತೀಯ ಕ್ರಿಕೆಟ್‌ ತಂಡವನ್ನು ರೂಪಾಂತರ ಮಾಡಿದವರು ಗಂಗೂಲಿ. ಭಾರತೀಯ ಕ್ರಿಕೆಟ್‌ ತಂಡದ ಮನಸ್ಥಿತಿಯನ್ನು ಪರಿವರ್ತಿಸಿದ ನಾಯಕ ಅವರು. ಅವರು ನಾಯಕರಾಗುವುದಕ್ಕೂ ಮೊದಲು, ಬಹುಶಃ 1997–98ಕ್ಕೂ ಮೊದಲು ಭಾರತಕ್ಕೆ ಪಾಕ್‌ ವಿರುದ್ಧ ಗೆಲ್ಲುವ ಮನಸ್ಥಿತಿಯೇ ಇರಲಿಲ್ಲ,’ ಎಂದು ಅಖ್ತರ್‌ ಹೇಳಿದ್ದಾರೆ.

ADVERTISEMENT

‘ಪ್ರತಿಭೆಗಳನ್ನು ಗುರುತಿಸಲು ಗಂಗೂಲಿ ಅವರಿಗೆ ಗೊತ್ತಿತ್ತು. ಹರ್ಭಜನ್‌ ಸಿಂಗ್‌, ವೀರೇಂದ್ರ ಸೆಹ್ವಾಗ್‌, ಜಹೀರ್‌ ಖಾನ್‌, ಯುವರಾಜ್‌ ಸಿಂಗ್‌ಅವರಂಥವರನ್ನು ಕ್ರಿಕೆಟ್‌ಗೆ ತಂದವರೇ ಅವರು. ಅವರ ಅವಧಿಯಲ್ಲಿ ನಾನು ವಿಭಿನ್ನ ಭಾರತೀಯ ತಂಡವನ್ನು ನೋಡಿದ್ದೆ. ಅವರ ಅವಧಿಯಲ್ಲಿ ಪಾಕಿಸ್ತಾನವನ್ನು ಸೋಲಿಸುವ ತಂಡ ಸೃಷ್ಟಿಯಾಗಿತ್ತು. 2004ರಲ್ಲಿ ಪಾಕಿಸ್ತಾನದಲ್ಲೇ ಪಾಕ್‌ ಅನ್ನು ಮಣಿಸಬಲ್ಲ ತಂಡವನ್ನು ಗಂಗೂಲಿ ಕಟ್ಟಿದ್ದರು. ಅದು ಬಹುದೊಡ್ಡ ಸರಣಿಯೂ ಆಗಿತ್ತು,’ ಎಂದು ಅಖ್ತರ್‌ ಗಂಗೂಲಿಯನ್ನು ಕೊಂಡಾಡಿದ್ದಾರೆ.

ಭಾರತೀಯ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿರುವ ಸೌರವ್‌ ಗಂಗೂಲಿ 2000–2005ರ ವರೆಗೆ ನಾಯಕರಾಗಿದ್ದರು.ಯಶಸ್ವಿ ಕ್ರಿಕೆಟಿಗ ಎನಿಸಿಕೊಂಡಿರುವ ಗಂಗೂಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿಯನ್ನೂ ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.