ಲಾಹೋರ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ನಡುವೆ ಪಾಕಿಸ್ತಾನದ ಕ್ರಿಕೆಟ್ ಮಂಡಳಿಯು(ಪಿಸಿಬಿ) ಪಾಕಿಸ್ತಾನ ಸೂಪರ್ ಲೀಗ್ನ ಇನ್ನುಳಿದ ಪಂದ್ಯಗಳನ್ನು ಯುಎಇಗೆ ಶಿಫ್ಟ್ ಮಾಡುವ ನಿರ್ದಾರವನ್ನ ಶುಕ್ರವಾರ ಕೈಗೊಂಡಿದೆ.
ಲಾಹೋರ್ ಸೇರಿದಂತೆ ವಿವಿಧ ನಗರಗಳ ಮೇಲೆ ಭಾರತದ ಪ್ರತಿ ದಾಳಿ ಬೆನ್ನಲ್ಲೇ ವಿದೇಶಿ ಆಟಗಾರರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಿಸಿಬಿ ಈ ನಿರ್ಧಾರ ಕೈಗೊಂಡಿದೆ.
ರಾವಲ್ಪಿಂಡಿ, ಲಾಹೋರ್ ಮತ್ತು ಮುಲ್ತಾನ್ನಲ್ಲಿ ನಡೆಯಬೇಕಿದ್ದ ಸರಣಿಯ ಉಳಿದ 8 ಪಂದ್ಯಗಳನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ ಎಂದು ಪಿಸಿಬಿ ತಿಳಿಸಿದೆ.
ಇತ್ತೀಚೆಗೆ ಪಾಕಿಸ್ತಾನದೊಳಗೆ ನಡೆದ ದಾಳಿಯಲ್ಲಿ ಭಾರತವು ಪಿಎಸ್ಎಲ್ ಅನ್ನು ಅಡ್ಡಿಪಡಿಸಲು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಗುರಿಯಾಗಿಸಿಕೊಂಡಿತ್ತು ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಆರೋಪಿಸಿದ್ದಾರೆ.
ದೇಶೀಯ ಮತ್ತು ವಿದೇಶಿ ಕ್ರಿಕೆಟಿಗರ ಕಳವಳಗಳನ್ನು ಸೂಕ್ತವಾಗಿ ಪರಿಹರಿಸಲು ಯುಎಇಗೆ ಪಂದ್ಯಗಳ ಸ್ಥಳಾಂತರ ಮಾಡಲಾಗಿದೆ ಎಂದು ಪಿಸಿಬಿ ಮುಖ್ಯಸ್ಥರು ಹೇಳಿದ್ದಾರೆ.
ಗುರುವಾರದಂದು ಪಿಸಿಬಿ, ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪೇಶಾವರ್ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ನಡುವಿನ ನಿಗದಿತ ಪಂದ್ಯವನ್ನು ರದ್ದುಗೊಳಿಸಿತ್ತು.
ಭದ್ರತಾ ಕಾರಣಗಳಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಲೀಗ್ನಿಂದ ಹೊರಹೋಗುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳಲ್ಲಿನ ವರದಿಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.