ADVERTISEMENT

IND vs SA |ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ; ಕನ್ನಡಿಗ ರಾಹುಲ್‌ಗೆ ಸಾರಥ್ಯ

ದಕ್ಷಿಣ ಆಫ್ರಿಕಾ ವಿರುದ್ಧ ಬೂಮ್ರಾ, ಸಿರಾಜ್‌, ಅಕ್ಷರ್‌ಗೆ ವಿಶ್ರಾಂತಿ

ಪಿಟಿಐ
Published 23 ನವೆಂಬರ್ 2025, 15:40 IST
Last Updated 23 ನವೆಂಬರ್ 2025, 15:40 IST
<div class="paragraphs"><p>ಕೆ.ಎಲ್. ರಾಹುಲ್</p></div>

ಕೆ.ಎಲ್. ರಾಹುಲ್

   

(ಪಿಟಿಐ ಚಿತ್ರ)

ನವದೆಹಲಿ: ಅನುಭವಿ ಬ್ಯಾಟರ್, ಕರ್ನಾಟಕದ ಕೆ.ಎಲ್‌.ರಾಹುಲ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಎಂಟು ತಿಂಗಳ ನಂತರ ಏಕದಿನ ತಂಡಕ್ಕೆ ಮರಳಿದ್ದಾರೆ.

ADVERTISEMENT

ಕತ್ತಿನ ಸ್ನಾಯುನೋವಿನಿಂದಾಗಿ ನಾಯಕ ಶುಭಮನ್ ಗಿಲ್ ಅವರು ಸರಣಿಗೆ ಅಲಭ್ಯರಾದ ಕಾರಣ ರಾಹುಲ್ ಅವರಿಗೆ ಸಾರಥ್ಯ ವಹಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತದಲ್ಲಿ ಮೊದಲ ಟೆಸ್ಟ್‌ ಪಂದ್ಯದ ವೇಳೆ ಅವರಿಗೆ ಕೊರಳಿಗೆ ನೋವು ಕಾಣಿಸಿಕೊಂಡಿತ್ತು.

‘ರಾಹುಲ್ ಅವರಿಗೆ ಈ ಸರಣಿಗೆ ಸೀಮಿತಗೊಳಿಸಿ ನಾಯಕತ್ವ ನೀಡಲಾಗಿದೆ. ಪಂತ್ ಅವರು ಕಳೆದೊಂದು ವರ್ಷದಲ್ಲಿ ಒಂದು ಏಕದಿನ ಪಂದ್ಯ ಮಾತ್ರ ಆಡಿದ್ದಾರೆ. ಶುಭಮನ್ ಗಿಲ್ ಅವರ ಕತ್ತು ನೋವು ಗುಣವಾಗಲಿದ್ದು, ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಗೆ (2026ರ ಜನವರಿಯಲ್ಲಿ) ಅವರು ಮರಳುವ ನಿರೀಕ್ಷೆಯಲ್ಲಿ ಆಯ್ಕೆಗಾರರಿದ್ದಾರೆ’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಜಡೇಜ ಅವರು ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ನಂತರ ಏಕದಿನ ತಂಡದಲ್ಲಿ ಆಡಿರಲಿಲ್ಲ. ಅಕ್ಷರ್ ಪಟೇಲ್ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ ಜಡೇಜ ಹಾದಿ ಸುಗಮವಾಗಿದೆ.

ಸ್ಪಿನ್‌ ಆಲ್‌ರೌಂಡರ್ ಅಕ್ಷರ್ ಪಟೇಲ್ ಜೊತೆ ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.

ಕುಲದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರು ಈ ಹಿಂದೆ ಒಂದು ಏಕದಿನ ಪಂದ್ಯ ಮಾತ್ರ ಆಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಿದ್ದ ಅನುಭವಿಗಳಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೂ ತಂಡದಲ್ಲಿದ್ದಾರೆ.

ಗಾಯಕವಾಡಗೆ ಅವಕಾಶ: ದಕ್ಷಿಣ ಆಫ್ರಿಕಾ ಎ ವಿರುದ್ಧ ಇತ್ತೀಚಿನ ಏಕದಿನ ಸರಣಿಯಲ್ಲಿ ಭಾರತ ಎ ತಂಡದ ಪರ ಸ್ಫೂರ್ತಿಯುತವಾಗಿ ಆಡಿದ ಋತುರಾಜ್ ಗಾಯಕವಾಡ ಅವರೂ ಅವಕಾಶ ಪಡೆದಿದ್ದಾರೆ. ಅವರು ಮೂರು ಪಂದ್ಯಗಳಲ್ಲಿ ಕ್ರಮವಾಗಿ 117, ಅಜೇಯ 68 ಮತ್ತು 25 ರನ್ ಬಾರಿಸಿದ್ದರು.

ಉಪನಾಯಕ ಶ್ರೇಯಸ್ ಅಯ್ಯರ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಗಾಯಕವಾಡ ಅವಕಾಶ ಪಡೆದಿದ್ದಾರೆ. ಅವರು ಇದುವರೆಗೆ ಆರು ಏಕದಿನ ಪಂದ್ಯಗಳಲ್ಲಿ ಆಡಿದ್ದು, 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಬ್ಹೆರಾದಲ್ಲಿ ಕೊನೆಯ ಬಾರಿ ಆಡಿದ್ದರು.

ತಂಡ ಇಂತಿದೆ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ತಿಲಕ್ ವರ್ಮಾ, ಕೆ.ಎಲ್‌.ರಾಹುಲ್‌ (ನಾಯಕ), ರಿಷಭ್ ಪಂತ್, ವಾಷಿಂಗ್ಟನ್ ಸುಂದರ್‌, ರವೀಂದ್ರ ಜಡೇಜ, ಕುಲದೀಪ್ ಯಾದವ್‌, ನಿತೀಶ್‌ ಕುಮಾರ್ ರೆಡ್ಡಿ, ಹರ್ಷಿತ್‌ ರಾಣಾ, ಋತುರಾಜ್ ಗಾಯಕವಾಡ, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್ ಮತ್ತು ಧ್ರುವ್ ಜುರೇಲ್.

ಏಕದಿನ ಸರಣಿ ವೇಳಾಪಟ್ಟಿ

ನವೆಂಬರ್ 30; ಮೊದಲ ಪಂದ್ಯ; ರಾಂಚಿ

ಡಿಸೆಂಬರ್ 3; ಎರಡನೇ ಪಂದ್ಯ; ರಾಯಪುರ

ಡಿಸೆಂಬರ್ 6; ಮೂರನೇ ಪಂದ್ಯ; ವಿಶಾಖಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.