ಲಂಡನ್: ವಿದೇಶಿ ಪಿಚ್ಗಳಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ ಎಂಬುದನ್ನು ಭಾರತದ ಆಟಗಾರರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇಲ್ಲಿ ಶನಿವಾರ ನಡೆದ ನ್ಯೂಜಿಲೆಂಡ್ ಎದುರಿನ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಸಾಧಾರಣ ಮೊತ್ತಕ್ಕೆ ಕುಸಿದಿದೆ.
ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಕಳಪೆ ಆಟ ಆಡಿ ಪೆವಿಲಿಯನ್ಗೆ ಪೆರೇಡ್ ನಡೆಸಿದರೆ, ಮಧ್ಯಮ ಕ್ರಮಾಂಕದ ಹಾರ್ದಿಕ್ ಪಾಂಡ್ಯ ಮತ್ತು ಕೆಳ ಕ್ರಮಾಂಕದ ರವೀಂದ್ರ ಜಡೇಜ ಕೆಚ್ಚೆದೆಯಿಂದ ಬ್ಯಾಟಿಂಗ್ ಮಾಡಿದರು. ಹೀಗಾಗಿ ತಂಡಕ್ಕೆ 50 ಓವರ್ಗಳಲ್ಲಿ 179 ರನ್ ಗಳಿಸಲು ಸಾಧ್ಯವಾಯಿತು. ಟ್ರೆಂಟ್ ಬೌಲ್ಟ್ ಮತ್ತು ಜೇಮ್ಸ್ ನೀಶಮ್ ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್ ಕಬಳಿಸಿ ಭಾರತ ಬ್ಯಾಟಿಂಗ್ನ ಬೆನ್ನೆಲುಬು ಮುರಿದರು.
ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಆರಂಭಿಕ ಜೋಡಿ ಸೇರಿದಂತೆ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ಮನ್ಗಳು ನ್ಯೂಜಿಲೆಂಡ್ ವೇಗಿಗಳ ದಾಳಿಗೆ ನಲುಗಿದರು. ಟ್ರೆಂಟ್ ಬೌಲ್ಟ್ ಸತತ ಮೂರು ಓವರ್ಗಳಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಕೆ.ಎಲ್.ರಾಹುಲ್ ಅವರ ವಿಕೆಟ್ ಉರುಳಿಸಿದರು.
ಕಾಲಿನ್ ಡಿ ಗ್ರ್ಯಾಂಡ್ಹೋಮ್ ಎಸೆತದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆಗಿ ಮರಳಿದರು. ಈ ಸಂದರ್ಭದಲ್ಲಿ ತಂಡದ ಮೊತ್ತ ಕೇವಲ 39 ರನ್ ಆಗಿತ್ತು. ಹಾರ್ದಿಕ್ ಪಾಂಡ್ಯ ಮತ್ತು ಮಹೇಂದ್ರ ಸಿಂಗ್ ಧೋನಿ ಜೊತೆಗೂಡಿದಾಗ ಭಾರತದ ಅಭಿಮಾನಿಗಳಲ್ಲಿ ಭರವಸೆ ಮೂಡಿತು.
ಇವರಿಬ್ಬರು 38 ರನ್ಗಳ ಜೊತೆಯಾಟ ಆಡಿದರು. ಆರು ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ ಪಾಂಡ್ಯ 30 ರನ್ ಗಳಿಸಿದರು. ಆದರೆ ಧೋನಿ ನಿಧಾನಗತಿಯ ಬ್ಯಾಟಿಂಗ್ಗೆ ಮೊರೆ ಹೋದರು. 42 ಎಸೆತ ಎದುರಿಸಿದ ಅವರು ಒಂದು ಬೌಂಡರಿಯೊಂದಿಗೆ ಕೇವಲ 17 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಕೂಡ ವೈಫಲ್ಯ ಕಂಡರು.
ಜಡೇಜ ತಾಕತ್ತು: ಮಹೇಂದ್ರ ಸಿಂಗ್ ಧೋನಿ ಔಟಾದಾಗ ಭಾರತದ ಮೊತ್ತ ಏಳು ವಿಕೆಟ್ಗಳಿಗೆ 91 ರನ್ ಆಗಿತ್ತು. ಹೀಗಾಗಿ ತಂಡ 120 ರನ್ ಗಳಿಸುವುದು ಕೂಡ ಕಷ್ಟಸಾಧ್ಯ ಎಂದೆನಿಸಿತ್ತು. ಆದರೆ ಕ್ರೀಸ್ಗೆ ಬಂದ ಎಡಗೈ ಬ್ಯಾಟ್ಸ್ಮನ್ ರವೀಂದ್ರ ಜಡೇಜ ನ್ಯೂಜಿಲೆಂಡ್ ದಾಳಿಯನ್ನು ಮೆಟ್ಟಿ ನಿಂತರು. 50 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿ ಸಿಡಿಸಿದ ಅವರು 54 ರನ್ ಗಳಿಸಿ ಮಿಂಚಿದರು. ತಾಳ್ಮೆಯ ಆಟದ ಮೂಲಕ ಅವರಿಗೆ ಕುಲದೀಪ್ ಯಾದವ್ ಉತ್ತಮ ಸಹಕಾರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.