ಬೆಂಗಳೂರು: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅವರು ಫಿಟ್ನೆಸ್ ಪರೀಕ್ಷೆ ನೀಡಲು ಇಲ್ಲಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ)ಕ್ಕೆ ಆಗಮಿಸಿದ್ದಾರೆ. ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅವರು ಭಾರತ ತಂಡದ ಉಪನಾಯಕರಾಗಿದ್ದಾರೆ.
ಭಾರತ ತಂಡದ ಎಲ್ಲ ಆಟಗಾರರೂ ಸೆಪ್ಟೆಂಬರ್ 4ರಂದು ದುಬೈನಲ್ಲಿ ಸೇರಲಿದ್ದಾರೆ. ಸೆ. 9ರಿಂದ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಆಡಲಿದೆ. ಯುಎಇಯನ್ನು ಎದುರಿಸಲಿದೆ.
ಫ್ಲೂ ಆಗಿದ್ದರಿಂದ ಗಿಲ್ ಅವರು ದುಲೀಪ್ ಟ್ರೋಫಿ ಕ್ವಾರ್ಟರ್ಫೈನಲ್ನಲ್ಲಿ ಆಡಲಿಲ್ಲ. ಅವರು ಈಸ್ಟ್ ಜೋನ್ ಎದುರಿನ ಪಂದ್ಯದಲ್ಲಿ ನಾರ್ತ್ ಜೋನ್ ತಂಡದ ನಾಯಕತ್ವ ವಹಿಸಬೇಕಿತ್ತು. ಗಿಲ್ ಅವರು ಇನ್ನೂ ತಮ್ಮ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಚಂಡೀಗಡದ ತಮ್ಮ ಮನೆಯಲ್ಲಿಯೇ ಅವರು ವಿಶ್ರಾಂತಿ ಪಡೆದಿದ್ದರು. ಇದೀಗ ಬೆಂಗಳೂರಿಗೆ ಆಗಮಿಸಿದ್ದು. ಇಲ್ಲಿಂದಲೇ ಅವರು ದುಬೈಗೆ ತೆರಳುವರು ಎಂದೂ ಹೇಳಲಾಗಿದೆ.
ವಿಕೆಟ್ಕೀಪರ್ ಜಿತೇಶ್ ಶರ್ಮಾ ಕೂಡ ಸಿಒಇಗೆ ಬಂದಿದ್ದಾರೆ. ವೇಗಿ ಜಸ್ಪ್ರೀತ್ ಬೂಮ್ರಾ, ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರೂ ಇಲ್ಲಿ ಫಿಟ್ನೆಸ್ ಪರೀಕ್ಷೆ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.