ADVERTISEMENT

5ರಿಂದ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 12:59 IST
Last Updated 30 ಜನವರಿ 2023, 12:59 IST
   

ಬೆಳಗಾವಿ: ಇಲ್ಲಿನ ಆಟೊ ನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಫೆ.5ರಿಂದ 9ರೆವರೆಗೆ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು, 27 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶ ಹಾಗೂ ರೈಲ್ವೇಸ್‌ ತಂಡದ ಆಟಗಾರರು ಭಾಗವಹಿಸಲಿದ್ದಾರೆ.

‘ದೇಶದ ಏಳು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಆ ಪೈಕಿ ‘ಬಿ’ ಗುಂಪಿನ ಲೀಗ್‌ ಹಂತದ 10 ಪಂದ್ಯಗಳನ್ನು ಬೆಳಗಾವಿಯಲ್ಲಿ ಅಯೋಜಿಸಲಾಗುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ತಂಡಗಳು ಪಾಲ್ಗೊಳ್ಳಲಿವೆ’ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಕಿವಡಸಣ್ಣವರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘5ನೇ ಆವೃತ್ತಿಯ ನಾಗೇಶ ಟ್ರೋಫಿ’ ನಡೆಸುವ ಅವಕಾಶ ಬೆಳಗಾವಿಗೆ ಸಿಕ್ಕಿದೆ. ಇಂಡಸ್‌ಇಂಡ್‌ ಬ್ಯಾಂಕ್‌ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಸಹಯೋಗದಲ್ಲಿ ಈ ಟೂರ್ನಿ ಆಯೋಜಿಸಲಾಗಿದೆ. ಆಟಗಾರರಿಗೆ ಉತ್ತಮ ಹೋಟೆಲ್‌ನಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ’ ಎಂದರು.

ADVERTISEMENT

ಸಂಸ್ಥೆಯ ಬೆಳಗಾವಿ ಶಾಖೆ ಮುಖ್ಯಸ್ಥ ಎಂ.ಜಿ.ಅರುಣಕುಮಾರ್, ‘ಈ ಟೂರ್ನಿಗೆ ತಗಲುವ ವೆಚ್ಚದ ಶೇ 50ರಷ್ಟು ಮೊತ್ತವನ್ನು ಇಂಡಸ್‌ಇಂಡ್‌ ಬ್ಯಾಂಕ್‌ ಭರಿಸಲಿದೆ. ದಾನಿಗಳ ನೆರವಿನಿಂದ ಉಳಿದ ವೆಚ್ಚ ಭರಿಸಲಿದ್ದೇವೆ. ಹೀಗಾಗಿ ನಗರದ ಸಂಘ–ಸಂಸ್ಥೆಗಳು ನಮಗೆ ನೆರವಾಗಬೇಕು’ ಎಂದು ಕೋರಿದರು.

ಶಿವಕುಮಾರ ಹಲ್ಯಾಳ, ದೀಪಾ ಈಟಿ, ತೌಸಿಫ್ ಕುಂದನಾಯ್ಕ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.