ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ವಂಚಿತರಾಗಿರುವ ಪ್ರತಿಭಾವಂತ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದು, ‘ಸೂರ್ಯಕುಮಾರ್ ಯಾದವ್ ಒಬ್ಬ ಅತ್ಯುತ್ತಮ ಬ್ಯಾಟ್ಸ್ಮನ್. ಅವರ ಸಮಯ ಶೀಘ್ರವೇ ಬರಲಿದೆ’ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೂರ್ಯಕುಮಾರ್ಗೆ ಸ್ಥಾನ ಸಿಗದಿರುವ ಬಗ್ಗೆ ಸಾಕಷ್ಟು ಮಂದಿ ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿರುವ ಯಾದವ್, 13 ಇನಿಂಗ್ಸ್ಗಳಿಂದ 410 ರನ್ ಕಲೆಹಾಕಿದ್ದಾರೆ. 2019ರಲ್ಲಿ 15 ಇನಿಂಗ್ಸ್ಗಳಲ್ಲಿ 424 ರನ್ ಮತ್ತು 2018ರಲ್ಲಿ 14 ಇನಿಂಗ್ಸ್ಗಳಿಂದ 512 ರನ್ ಗಳಿಸಿದ್ದರು.
ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿರುವ ಗಂಗೂಲಿ, ಸೂರ್ಯಕುಮಾರ್ ಒಬ್ಬರೇ ಅಲ್ಲ. ಇನ್ನೂ ಸಾಕಷ್ಟು ಯುವ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್, ಕೋಲ್ಕತ್ತ ನೈಟ್ರೈಡರ್ಸ್ನ ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶುಭಮನ್ ಗಿಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ತ ಪಡಿಕ್ಕಲ್ ಈ ಟೂರ್ನಿಯಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಡಿಕ್ಕಲ್ ಈ ಟೂರ್ನಿಯಲ್ಲಿ ಆರ್ಸಿಬಿ ಪರ ಗರಿಷ್ಠ (472) ರನ್ ಗಳಿಸಿದ ಆಟಗಾರ ಎನಿಸಿದ್ದು, ಒಟ್ಟಾರೆ ಟೂರ್ನಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಯಾದವ್ ಅವರದು 13ನೇ ಸ್ಥಾನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.