ದುಬೈ:ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ, ಅತ್ಯುತ್ತಮ ಪ್ರದರ್ಶನ ನೀಡುವ ಹಂಬಲವನ್ನು ಹೊಂದಿದ್ದಾರೆ ಎಂದು ಆರ್ಸಿಬಿ ನಿರ್ದೇಶಕ ಹಾಗೂ ಮುಖ್ಯ ತರಬೇತುದಾರ ಮೈಕ್ ಹೆಸನ್ ತಿಳಿಸಿದ್ದಾರೆ.
ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 92 ರನ್ನಿಗೆ ಆಲೌಟ್ ಆಗಿದ್ದ ಆರ್ಸಿಬಿ ಹೀನಾಯ ಸೋಲಿಗೆ ಶರಣಾಗಿತ್ತು. ನಾಯಕ ಕೊಹ್ಲಿ ಕೇವಲ ಐದು ರನ್ ಗಳಿಸಿ ಔಟಾದರು.
ಅಭ್ಯಾಸದ ಅವಧಿಯ ವಿಡಿಯೊವನ್ನು ಆರ್ಸಿಬಿ ಹಂಚಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ತಂಡದೆಲ್ಲ ಆಟಗಾರರು ಕಠಿಣ ತರಬೇತಿಯಲ್ಲಿ ಭಾಗಿಯಾಗಿದ್ದಾರೆ.
'ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಹಂಬಲದಲ್ಲಿದ್ದಾರೆ. ಖಂಡಿತವಾಗಿಯೂ ಅವರು ತಮ್ಮ ಆತ್ಮವಿಶ್ವಾಸ ಹಾಗೂ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳಲಿದ್ದಾರೆ' ಎಂದು ಹೆಸನ್ ತಿಳಿಸಿದ್ದಾರೆ.
ಮುಂದಿನ ಎರಡು ಪಂದ್ಯಗಳು ಆರ್ಸಿಬಿ ಪಾಲಿಗೆ ನಿರ್ಣಾಯಕವೆನಿಸಿದೆ. ಶಾರ್ಜಾದಲ್ಲಿ ಶುಕ್ರವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದುಬೈಯಲ್ಲಿ ಭಾನುವಾರದಂದು ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.
ಈ ಮೊದಲು ಪ್ರಸಕ್ತ ಸಾಲಿನ ಐಪಿಎಲ್ ಬಳಿಕ ಆರ್ಸಿಬಿ ನಾಯಕತ್ವ ಸ್ಥಾನವನ್ನು ತೊರೆಯುವುದಾಗಿವಿರಾಟ್ ಕೊಹ್ಲಿ ಘೋಷಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.