ಮುಂಬೈ: ಗೆಲ್ಲಲೇಬೇಕಾದ ಪಂದ್ಯದಲ್ಲಿ ಅಮೋಘ ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಭವದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಗುಂಪಿನ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ.
ಈ ಪಂದ್ಯಕ್ಕೂ ಹಿಂದಿನ ದಿನ 90 ನಿಮಿಷಗಳ ಕಾಲ ನೆಟ್ಸ್ನಲ್ಲಿ ಕಠಿಣ ಅಭ್ಯಾಸ ನಡೆಸಿರುವುದಾಗಿ ಪಂದ್ಯದ ಬಳಿಕ ಕೊಹ್ಲಿ ಬಹಿರಂಗಪಡಿಸಿದ್ದಾರೆ.
'ನಮ್ಮ ಪಾಲಿಗಿದು ಅತಿ ಮುಖ್ಯ ಪಂದ್ಯವಾಗಿತ್ತು. ಅಂಕಿಅಂಶಗಳಲ್ಲ, ನನ್ನ ತಂಡಕ್ಕಾಗಿ ಉತ್ತಮ ಆಟ ಆಡಲು ಸಾಧ್ಯವಾಗದಿರುವುದು ನಿರಾಸೆಯನ್ನುಂಟು ಮಾಡಿದೆ. ಈ ಪಂದ್ಯದಲ್ಲಿ ತಂಡದ ಪರ ಪರಿಣಾಮ ಬೀರಲು ಸಾಧ್ಯವಾಗಿದೆ. ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಲು ಸಾಧ್ಯವಾಗಿದೆ' ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕೊಹ್ಲಿ ಹೇಳಿದ್ದಾರೆ.
'ನನ್ನ ನಿರ್ವಹಣೆ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳಿವೆ. ಆಟದ ಮೇಲಿನ ದೃಷ್ಟಿಕೋನವನ್ನು ಸರಿಯಾಗಿರಿಸಬೇಕು. ನಿರೀಕ್ಷೆಗಳಿಗೆ ತಕ್ಕಂತೆ ಆಟವಾಡುವ ಭರದಲ್ಲಿ ಪ್ರಕ್ರಿಯೆ ಮರೆತುಬಿಡಬಹುದು. ನಿಜವಾಗಿಯೂ ಕಠಿಣ ಪರಿಶ್ರಮ ವಹಿಸಿದ್ದೇನೆ. ಈ ಪಂದ್ಯಕ್ಕೂ ಹಿಂದಿನ ದಿನ ನೆಟ್ಸ್ನಲ್ಲಿ 90 ನಿಮಿಷಗಳ ಕಾಲ ನಿರಂತರವಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದೇನೆ' ಎಂದು ಹೇಳಿದ್ದಾರೆ.
54 ಎಸೆತಗಳನ್ನು ಎದುರಿಸಿದ ಕೊಹ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು.
ಆರ್ಸಿಬಿ ಪ್ಲೇ-ಆಫ್ ಪ್ರವೇಶಿಸಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.