ಮುಂಬೈ: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದ 19 ವರ್ಷದ ಯುವ ಬ್ಯಾಟರ್ ರಾಜ್ ಬಾವಾ ಅವರ ಬೆನ್ನು ತಟ್ಟುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಂಕ್ ಅಗರವಾಲ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ಆರ್ಸಿಬಿ ಒಡ್ಡಿದ 206 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.
ಚೇಸಿಂಗ್ ವೇಳೆ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟರ್ ರಾಜ್ ಬಾವಾ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ಎಲ್ಬಿಡಬ್ಲ್ಯು ಬಲೆಗೆ ಸಿಲುಕಿದ್ದರು.
ತಲೆ ತಗ್ಗಿಸುತ್ತಾ ಡಗೌಟ್ನತ್ತ ಮರಳುತ್ತಿದ್ದ ರಾಜ್ ಬಾವಾ ಅವರನ್ನು ಮಯಂಕ್ ಸಂತೈಸಿದರು. ಅತಿ ಒತ್ತಡದ ಪರಿಸ್ಥಿತಿಯಲ್ಲೂ ಯುವ ಆಟಗಾರನ ಬೆನ್ನು ತಟ್ಟುವ ಮೂಲಕ ನಾಯಕ ತೋರಿರುವ ಬೆಂಬಲವು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಉತ್ತಮ ನಾಯಕನ ಗುಣ ಎಂದು ಹಾಡಿ ಹೊಗಳಿದ್ದಾರೆ.
ರಾಜ್ ಬಾವಾ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದಾರೆ. ಉಗಾಂಡ ವಿರುದ್ಧ 162 ರನ್ ಗಳಿಸಿದ್ದ ಬಾವಾ, ಇಂಗ್ಲೆಂಡ್ ವಿರುದ್ಧ ಫೈನಲ್ನಲ್ಲಿ ಐದು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.