ADVERTISEMENT

ಬೆಂಗಳೂರು ಪಡೆಗೆ ‘ರಾಯಲ್ಸ್‌’ ಚಾಲೆಂಜ್: ಆತ್ಮವಿಶ್ವಾಸದಲ್ಲಿ ಸಂಜು ಸ್ಯಾಮ್ಸನ್ ಬಳಗ

ದೇವದತ್ತ ಪಡಿಕ್ಕಲ್, ಯಜುವೇಂದ್ರ ಚಾಹಲ್ ಮೇಲೆ ಕಣ್ಣು

ಪಿಟಿಐ
Published 4 ಏಪ್ರಿಲ್ 2022, 19:30 IST
Last Updated 4 ಏಪ್ರಿಲ್ 2022, 19:30 IST
ದೇವದತ್ತ ಪಡಿಕ್ಕಲ್ 
ದೇವದತ್ತ ಪಡಿಕ್ಕಲ್    

ಮುಂಬೈ: ಹೋದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೆಲವು ಪಂದ್ಯಗಳಲ್ಲಿ ಜಯಿಸಲು ಕಾರಣರಾಗಿದ್ದವರು ಕರ್ನಾಟಕದ ದೇವದತ್ತ ಪಡಿಕ್ಕಲ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್.

ಆದರೆ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಇವರಿಬ್ಬರೂ ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಕಣಕ್ಕಿಳಿಯುವರು.

ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡವು ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದೆ. ಬ್ಯಾಟರ್ ಜಾಸ್ ಬಟ್ಲರ್ ಈ ಸಲ ಶತಕ ಬಾರಿಸಿದ ಮೊದಲಿಗರಾಗಿದ್ದಾರೆ.

ADVERTISEMENT

ನಾಯಕ ಸಂಜು,ಶಿಮ್ರಾನ್ ಹೆಟ್ಮೆಯರ್ ಅವರು ಉತ್ತಮ ಲಯದಲ್ಲಿದ್ದಾರೆ. ನವದೀಪ್ ಸೈನಿ, ಚಾಹಲ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಇರುವ ಬೌಲಿಂಗ್ ಪಡೆಯು ಎದುರಾಳಿಗಳಿಗೆ ಸವಾಲೊಡ್ಡಲು ಸಿದ್ಧವಾಗಿದೆ.

ಆರ್‌ಸಿಬಿಯು ಎರಡು ಪಂದ್ಯಗಳಲ್ಲಿ ಆಡಿದ್ದು ಒಂದು ಸೋತು ಮತ್ತೊಂದರಲ್ಲಿ ಗೆದ್ದಿದೆ. ಆದರೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಫಫ್, ವಿರಾಟ್ ಕೊಹ್ಲಿ, ಅನುಜ್ ರಾವತ್ ಎರಡನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಅನುಭವಿ ದಿನೇಶ್ ಕಾರ್ತಿಕ್ ‘ಫಿನಿಷರ್’ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.

ಮೊದಲ ಪಂದ್ಯದಲ್ಲಿ ಇನ್ನೂರಕ್ಕೂ ಹೆಚ್ಚು ರನ್‌ಗಳ ಮೊತ್ತವನ್ನು ಪೇರಿಸಿಯೂ ಸೋತಿದ್ದ ತಂಡವು, ಎರಡನೇ ಪಂದ್ಯದಲ್ಲಿ 128 ರನ್‌ಗಳ ಗುರಿ ಸಾಧಿಸಲು ಕಷ್ಟಪಟ್ಟಿತ್ತು. 19.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆದ್ದು ನಿಟ್ಟುಸಿರುಬಿಟ್ಟಿತ್ತು. ಆದರೆ ಆ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಲಯ ಕಂಡುಕೊಂಡಿದ್ದರು. ಶ್ರೀಲಂಕಾದ ವಣಿಂದು ಹಸರಂಗಾ, ಆಕಾಶ್ ದೀಪ್ ಮತ್ತು ಹರ್ಷಲ್ ಪಟೇಲ್ ಕೋಲ್ಕತ್ತ ಬ್ಯಾಟರ್‌ಗಳನ್ನು ಕಾಡಿದ್ದರು. ಇದೀಗ ಅವರ ಮುಂದೆ ರಾಜಸ್ಥಾನದ ಬಲಿಷ್ಠ ಬ್ಯಾಟಿಂಗ್ ಪಡೆಯ ಸವಾಲು ಇದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.