ಐಪಿಎಲ್
ಚಿತ್ರ: IPL ವೆಬ್ಸೈಟ್
ನವದೆಹಲಿ: ಭಾರತ– ಪಾಕಿಸ್ತಾನ ಸೇನಾ ಸಂಘರ್ಷದ ಕಾರಣ ಸ್ಥಗಿಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ 16 ಅಥವಾ 17ರಂದು ಆರಂಭಗೊಳ್ಳುವ ಸಾಧ್ಯತೆಯಿದೆ. ಫೈನಲ್ ಪಂದ್ಯವನ್ನು ಕೋಲ್ಕತ್ತದಿಂದ ಸ್ಥಳಾಂತರಿಸುವ ಸಂಭವವಿದೆ.
ಮೇ 9ರಂದು ಒಂದು ವಾರದ ಮಟ್ಟಿಗೆ ಈ ಪಂದ್ಯಾವಳಿ ಸ್ಥಗಿತಗೊಳಿಸಲಾಗಿತ್ತು. ಆದರೆ ಶನಿವಾರ ಯುದ್ಧ ಸ್ವರೂಪದ ಸಂಘರ್ಷ ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಿಂದ ಲೀಗ್ ಮುಂದುವರಿಯಲು ಅವಕಾಶವಾಗಿದೆ. ಐಪಿಎಲ್ ಆಡಳಿತ ಮಂಡಳಿ ಮತ್ತು ಬಿಸಿಸಿಐ ಅಧಿಕಾರಿಗಳು ಲೀಗ್ ಪುನರಾರಂಭಕ್ಕೆ ಸಂಬಂಧಿಸಿ ಯೋಜನೆ ರೂಪಿಸಲು ಭಾನುವಾರ ಸಭೆ ಸೇರಿದ್ದರು.
‘ಸೂಕ್ತ ವೇಳಾಪಟ್ಟಿ ರೂಪಿಸಲು ಮಂಡಳಿಯು ಕಾರ್ಯಪ್ರವೃತ್ತವಾಗಿದೆ’ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ ಶುಕ್ಲಾ ತಿಳಿಸಿದರು.
‘ಐಪಿಎಲ್ಗೆ ಸಂಬಂಧಿಸಿ ಇದುವವರೆಗೆ ನಿರ್ಧಾರ ಕೈಗೊಂಡಿಲ್ಲ. ಪರಿಹಾರ ಕಂಡುಕೊಳ್ಳಲು ಮಂಡಳಿ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ. ಬಿಸಿಸಿಐ ಕಾರ್ಯದರ್ಶಿ, ಐಪಿಎಲ್ ಅಧ್ಯಕ್ಷರು ಪ್ರಾಂಚೈಸಿಗಳು ಮತ್ತು ಇತರ ಭಾಗೀಕದಾರರ ಜೊತೆ ಮಾತುಕತೆಯಲ್ಲಿ ಇದ್ದಾರೆ. ಶೀಘ್ರವೇ ನಿರ್ಧಾರಕ್ಕೆ ಬರಲಾಗುವುದು. ಸಾಧ್ಯವಾದಷ್ಟು ಬೇಗ ಟೂರ್ನಿ ಆರಂಭಕ್ಕೆ ಪ್ರಯತ್ನ ನಡೆದಿದೆ’ ಎಂದರು.
ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದೊಡನೆ ಲೀಗ್ ಪುನರಾರಂಭಗೊಳ್ಳಲಿದೆ ಎಂದು ಐಪಿಎಲ್ ಮೂಲವೊಂದು ತಿಳಿಸಿದೆ. ಈ ಪಂದ್ಯ ಮೇ 9ರಂದು ನಿಗದಿಯಾಗಿತ್ತು.
ಎಲ್ಲ ತಂಡಗಳಿಗೆ ಆಟಗಾರರನ್ನು ಕರೆಸಿಕೊಳ್ಳುವಂತೆ ತಿಳಿಸಲಾಗಿದೆ. ಟೂರ್ನಿಯ ಮೇ 16 ಅಥವಾ 17ರಂದು ಲಖನೌ ಪಂದ್ಯದೊಡನೆ ಮುಂದುವರಿಯಲಿದೆ. ಅಂತಿಮ ವೇಳಾಪಟ್ಟಿ ಸೋಮವಾರ ಹಂಚಿಕೊಳ್ಳಲಾಗುವುದು’ ಎಂದು ಈ ಮೂಲ ಸುದ್ದಿಸಂಸ್ಥೆಗೆ ತಿಳಿಸಿದೆ.
‘ಉಳಿದ ಎಲ್ಲ ಪಂದ್ಯಗಳು ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಯಲಿವೆ. ದೆಹಲಿ ಮತ್ತು ಧರ್ಮಶಾಲಾಕ್ಕೆ ಉಳಿದ ಪಂದ್ಯಗಳ ಆತಿಥ್ಯ ಲಭ್ಯವಾಗುವುದಿಲ್ಲ. ಈ ಕ್ರೀಡಾಂಗಣದಿಂದ ಎಲ್ಲ ಸಲಕರಣೆಗಳನ್ನು ತೆಗೆದುಹಾಕಲಾಗಿದೆ’ ಎಂದೂ ತಿಳಿಸಿದೆ.
ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳ ಸ್ಥಳದಲ್ಲಿ ಬದಲಾವಣೆಯಾಗುವುದಿಲ್ಲ. ಈ ಪಂದ್ಯಗಳು ನಿಗದಿಯಂತೆ ಹೈದರಾಬಾದಿನಲ್ಲೇ ನಡೆಯಲಿವೆ. ಆದರೆ ಫೈನಲ್ ಪಂದ್ಯದ ಆತಿಥ್ಯ ಕೋಲ್ಕತ್ತದ ಬದಲು ಬೇರೆ ಕಡೆ ನಡೆಯುವ ಸಾಧ್ಯತೆಯಿದೆ. ಅಂದು ಕೋಲ್ಕತ್ತದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಒಂದು ವೇಳೆ ಫೈನಲ್ ಸ್ಥಳ ಬದಲಾದರೆ ಅದು ಅಹಮದಾಬಾದಿನಲ್ಲಿ ನಿಗದಿಯಾಗಲಿದೆ ಎಂದು ಮೂಲ ತಿಳಿಸಿದೆ.
‘ಉಳಿದ ಪಂದ್ಯಗಳ ಪುನರಾರಂಭಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರಕ್ಕೆ ಬರಲು ಇನ್ನು ಕೆಲ ದಿನಗಳಲ್ಲೇ ಮಂಡಳಿಯು ಫ್ರಾಂಚೈಸಿಗಳು, ಪ್ರಸಾರಕ ಸಂಸ್ಥೆ, ಪ್ರಾಯೋಜಕರು ಮತ್ತು ಆತಿಥ್ಯ ವಹಿಸುವ ರಾಜ್ಯ ಸಂಸ್ಥೆಗಳ ಜೊತೆ ಸಮಾಲೋಚನೆ ಆರಂಭಿಸಲಿದೆ.
ತಲಾ ಒಂದೊಂದು ಅಂಕ?:
ಗಡಿಯಲ್ಲಿ ಉದ್ವಿಗ್ನತೆಯ ಕಾರಣ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಧರ್ಮಶಾಲಾದಲ್ಲಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ಎರಡೂ ತಂಡಹಳಿಗಹೆ ತಲಾ ಒಂದೊಂದು ಪಾಯಿಂಟ್ ನೀಡುವ ಸಾಧ್ಯತೆಯಿದೆ. ತಂಡಗಳು ಅಂದು ಜಲಂಧರ್ಗೆ ಬಸ್ನಲ್ಲಿ ತೆರಳಿ ಡೆಲ್ಲಿಗೆ ರೈಲಿನ ಮೂಲಕ ದೆಹಲಿಗೆ ತೆರಳಿದ್ದವು.
ಕೇವಲ ನಾಲ್ಕು ಕ್ರೀಡಾಂಗಣಗಳಿಗೆ ಮಾತ್ರ ಉಳಿದ 16 ಪಂದ್ಯಗಳ ಆತಿಥ್ಯ ವಹಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತವರು ಪಂದ್ಯಗಳನ್ನು ಕಳೆದುಕೊಳ್ಳಲಿವೆ. ಇದರ ಅರ್ಥ ಲೀಗ್ನ ಉಳಿದ ಪಂದ್ಯಗಳು ಹೈದರಾಬಾದ್, ಚೆನ್ನೈ, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ.
ಚೆನ್ನೈ, ರಾಜಸ್ಥಾನ ರಾಯಲ್ಸ್ ಮತ್ತು ಸನ್ರೈಸರ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿವೆ. ಏಳು ತಂಡಗಳು ನಾಲ್ಕು ಪ್ಲೇ ಆಫ್ ಸ್ಥಾನಗಳಿಗೆ ಪೈಪೋಟಿಯಲ್ಲಿವೆ.
ಸದ್ಯ ಗುಜರಾತ್ ಟೈಟನ್ಸ್ (16 ಅಂಕ, ನೆಟ್ರನ್ ರೇಟ್ 0.793) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (16 ಪಾಯಿಂಟ್ಸ್, 0.482), ಪಂಜಾಬ್ ಕಿಂಗ್ಸ್ (15), ಮುಂಬೈ ಇಂಡಿಯನ್ಸ್ (14), ಡೆಲ್ಲಿ ಕ್ಯಾಪಿಟಲ್ಸ್ (13), ಕೋಲ್ಕತ್ತ ನೈಟ್ ರೈಡರ್ಸ್ (11) ಮತ್ತು ಲಖನೌ ಸೂಪರ್ ಜೈಂಟ್ಸ್ (10) ನಂತರದ ಸ್ಥಾನಗಳಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.