ಗ್ವಾಲಿಯರ್: ಬೆಂಗಳೂರಿನ ಮಯಂಕ್ ಅಗರವಾಲ್ ನಾಯಕತ್ವದ ರೆಸ್ಟ್ ಆಫ್ ಇಂಡಿಯಾ ತಂಡವು ಬುಧವಾರ ಆರಂಭವಾಗಲಿರುವ ಇರಾನಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.
2021–22ರಲ್ಲಿ ಮಧ್ಯಪ್ರದೇಶ ತಂಡವು ರಣಜಿ ಟ್ರೋಫಿ ಜಯಿಸಿತ್ತು.
ದೇಶಿ ಕ್ರಿಕೆಟ್ ಋತುವಿನ ಕೊನೆಯ ಟೂರ್ನಿ ಇದಾಗಿದೆ. ಕಳೆದ 15 ವರ್ಷಗಳಲ್ಲಿ ಇರಾನಿ ಟ್ರೋಫಿ ಟೂರ್ನಿಯ ಹೊಳಪು ಕುಂದಿದೆ. ಆದರೆ ಕೆಲವು ಆಟಗಾರರಿಗೆ ಇದು ಮಹತ್ವದ್ದಾಗುವ ಸಾಧ್ಯತೆ ಇದೆ. ಮಯಂಕ್ ಅಗರವಾಲ್ ಅವರಿಗೆ ಮರಳಿ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಈ ಟೂರ್ನಿಯು ವೇದಿಕೆಯಾಗುವ ನಿರೀಕ್ಷೆ ಇದೆ.
ಇತ್ತೀಚೆಗೆ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಯಂಕ್ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದರು. ಅವರ ನಾಯಕತ್ವದ ಕರ್ನಾಟಕ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು.
ಭಾರತ ತಂಡದಲ್ಲಿರುವ ಕನ್ನಡಿಗ ಕೆ.ಎಲ್. ರಾಹುಲ್ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರು ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇತ್ತ ದೇಶಿ ಕ್ರಿಕೆಟ್ನಲ್ಲಿ ಇನ್ನಷ್ಟು ಉತ್ತಮವಾಗಿ ಆಡಿದರೆ ಮಯಂಕ್ ಅವರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಆಡಲಿರುವ ಭಾರತ ತಂಡಕ್ಕೂ ಆಯ್ಕೆಯಾಗುವ ಅವಕಾಶ ಸಿಗಬಹುದು.
ಮಧ್ಯಪ್ರದೇಶ ತಂಡದಲ್ಲಿ ರಜತ್ ಪಾಟೀದಾರ್, ಬೌಲರ್ ಆವೇಶ್ ಖಾನ್ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.