ADVERTISEMENT

ಆತಂಕದ ವಾತಾವರಣವಿತ್ತು: ವಾರ್ನರ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 19:41 IST
Last Updated 2 ಜೂನ್ 2021, 19:41 IST
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್   

ಸಿಡ್ನಿ: ಭಾರತದಲ್ಲಿ ಈಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ನಡೆದಿದ್ದ ಸಂದರ್ಭದಲ್ಲಿ ಕೋವಿಡ್ –19 ಕಾರಣದಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಹೇಳಿದ್ದಾರೆ.

‘ಆ ಸಂದರ್ಭದಲ್ಲಿ ಭಾರತದಲ್ಲಿ ಕೋವಿಡ್ ರೋಗಿಗಳು ಆಮ್ಲಜನಕ, ಚಿಕಿತ್ಸೆ ಸಿಗದೆ ಪರದಾಡಿದ ದೃಶ್ಯಗಳನ್ನು ಟಿ.ವಿ.ಗಳಲ್ಲಿ ನೋಡಿದ್ದ ನಮ್ಮ ಕುಟುಂಬದವರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದರು. ಜೊತೆಗೆ ನಾವು ಕೂಡ ಬೆದರಿದ್ದೆವು‘ ಎಂದು ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಆಡಿದ್ದ ವಾರ್ನರ್ ನೋವಾಸ್ ಫಿಝಿ ಅ್ಯಂಡ್ ವಿಪಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಜನರು ಕೋವಿಡ್‌ನಿಂದ ಮೃತರಾದ ತಮ್ಮ ಸಂಬಂಧಿಕರ ಅಂತಿಮ ಸಂಸ್ಕಾರಕ್ಕಾಗಿ ಶವಾಗಾರಗಳ ಬಳಿ ಸಾಲುಗಟ್ಟಿದ್ದ ದೃಶ್ಯಗಳನ್ನು ಮೈದಾನದಿಂದ ಹೋಟೆಲ್‌ಗೆ ಹೋಗುವ ಮಾರ್ಗಗಳಲ್ಲಿ ನಾವೇ ನೋಡಿದ್ದೇವೆ. ಆ ದೃಶ್ಯಗಳು ಮನಕಲಕಿದ್ದವು. ಅವೆಲ್ಲವೂ ಭಯಾನಕವಾಗಿದ್ದವು‘ ಎಂದು ವಾರ್ನರ್ ನೆನಪಿಸಿಕೊಂಡಿದ್ದಾರೆ.

ADVERTISEMENT

‘ಮಾನವೀಯ ದೃಷ್ಟಿಕೋನದಿಂದ ನೋಡಿದಾಗ, ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಉತ್ತಮ ನಿರ್ಧಾರ. ಅಲ್ಲಿಂದ ಹೊರಟು ಸ್ವದೇಶಕ್ಕೆ ಸೇರುವುದು ನಮಗೂ ಕಠಿಣ ಸವಾಲಾಗಿತ್ತು. ಭಾರತದಿಂದ ಆಸ್ಟ್ರೇಲಿಯಾಕ್ಕೆ ವಿಮಾನಯಾನ ನಿರ್ಬಂಧಿಸಲಾಗಿತ್ತು. ಆದರೂ ಲಭ್ಯವಿರುವ ಮಾರ್ಗಗಳ ಮೂಲಕ ನಮ್ಮನ್ನು ಸುರಕ್ಷಿತವಾಗಿ ತವರಿಗೆ ಕಳಿಸುವಲ್ಲಿ ಅಲ್ಲಿಯ ಆಡಳಿತ ಮತ್ತು ಆಯೋಜಕರು ತುಂಬ ಶ್ರಮಿಸಿದ್ದಾರೆ. ಚೆನ್ನಾಗಿಯೂ ನಿರ್ವಹಿಸಿದ್ದಾರೆ. ಭಾರತವು ಕ್ರಿಕೆಟ್ ಆಟವನ್ನು ಅಪಾರವಾಗಿ ಪ್ರೀತಿಸುವ ದೇಶ‘ ಎಂದು ವಾರ್ನರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.