ADVERTISEMENT

ಬೃಹತ್‌‌ ಕ್ರೀಡಾಂಗಣ ನಿರ್ಮಾಣಕ್ಕೆ ಜಯವರ್ಧನೆ ವಿರೋಧ

ಪಿಟಿಐ
Published 18 ಮೇ 2020, 19:30 IST
Last Updated 18 ಮೇ 2020, 19:30 IST
ಮಹೇಲಾ ಜಯವರ್ಧನೆ
ಮಹೇಲಾ ಜಯವರ್ಧನೆ   

ಕೊಲಂಬೊ: ದೇಶದಲ್ಲಿ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಚಿಂತನೆ ನಡೆಸಿರುವ ಶ್ರೀಲಂಕಾ ಸರ್ಕಾರದ ಕ್ರಮವನ್ನು ಹಿರಿಯ ಕ್ರಿಕೆಟಿಗ ಮಹೇಲಾ ಜಯವರ್ಧನೆ ವಿರೋಧಿಸಿದ್ದಾರೆ. ‘ಈಗಿರುವ ಅಂಗಣಗಳೇ ಸೂಕ್ತವಾಗಿ ಬಳಕೆಯಾಗುತ್ತಿಲ್ಲ’ ಎಂದು ಅವರು ಕಿಡಿ ಕಾರಿದ್ದಾರೆ.

‘ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ (ಎಸ್‌ಎಲ್‌ಸಿ) ಸಹಯೋಗದೊಂದಿಗೆ ಹೋಮಗಾಮ ಪಟ್ಟಣದ ದಿಯಾಗಮ ಎಂಬಲ್ಲಿ 26 ಎಕರೆ ಪ್ರದೇಶದಲ್ಲಿ 60,000 ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಿಸುವ ಯೋಜನೆಯನ್ನು ಶ್ರೀಲಂಕಾ ಸರ್ಕಾರ ಭಾನುವಾರ ಪ್ರಕಟಿಸಿತ್ತು.

‘ನಮ್ಮಲ್ಲಿ ಈಗ ಇರುವ ಕ್ರೀಡಾಂಗಣಗಳಲ್ಲೇ ಸಾಕಷ್ಟು ಅಂತರರಾಷ್ಟ್ರೀಯ ಹಾಗೂ ಪ್ರಥಮದರ್ಜೆ ಪಂದ್ಯಗಳು ನಡೆಯುತ್ತಿಲ್ಲ. ಮತ್ತೊಂದು ಅಂಗಣ ಬೇಕಾ?’ ಎಂದು ಜಯವರ್ಧನೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಎಸ್‌ಎಲ್‌ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಹಾಗೂ ಸರ್ಕಾರದ ಮಾಹಿತಿ ಸಂವಹನ ತಂತ್ರಜ್ಞಾನ ಸಚಿವ ಬಂಡುಲಾ ಗುಣವರ್ಧನೆ ಅವರ ನೇತೃತ್ವದ ಸಮಿತಿಯು ಕ್ರೀಡಾಂಗಣ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿತು.

ಲಂಕಾದಲ್ಲಿ ಸದ್ಯ ಎಂಟು ಅಂತರರಾಷ್ಟ್ರೀಯ ಕ್ರೀಡಾಂಗಣಗಳಿವೆ. ಕ್ಯಾಂಡಿ, ಗಾಲೆ, ಕೊಲಂಬೊ, ಹಂಬಟೋಟ, ಡಂಬುಲಾ, ಪಲ್ಲೆಕೆಲೆ ಹಾಗೂ ಮೊರಾಟುವಾದಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.