ADVERTISEMENT

ಕ್ರಿಕೆಟ್‌ಗೆ ಮರಳಿದ ಅಬ್ರಾರ್ ಖಾಜಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 19:31 IST
Last Updated 22 ಜೂನ್ 2022, 19:31 IST
ಅಬ್ರಾರ್ ಖಾಜಿ 
ಅಬ್ರಾರ್ ಖಾಜಿ    

ಬೆಂಗಳೂರು: ಮೂರು ವರ್ಷಗಳ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿತ್ತೆನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅಟಗಾರ ಅಬ್ರಾರ್ ಖಾಜಿ ಕ್ರಿಕೆಟ್‌ಗೆ ಮರಳಿದ್ದಾರೆ.

2019ರಲ್ಲಿ ಪ್ರಕರಣ ನಡೆದಿತ್ತು. ಆಗ ಕರ್ನಾಟಕ ತಂಡದ ಮಾಜಿ ನಾಯಕ ಸಿ.ಎಂ. ಗೌತಮ್, ಅಮಿತ್ ಮಾವಿ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕರನ್ನು ಪೊಲೀಸರು ಬಂಧಿಸಿ ತನಿಖೆ ಮಾಡಿದ್ದರು. ಕಳೆದ ಜನವರಿಯಲ್ಲಿ ನಾಲ್ವರು ಆಟಗಾರರನ್ನು ಕರ್ನಾಟಕ ಹೈಕೋರ್ಟ್ ಆರೋಪ ಮುಕ್ತಗೊಳಿಸಿತ್ತು. ಇದರಿಂದಾಗಿ ನಿರಾಳವಾಗಿರುವ ಅಬ್ರಾರ್, ಜವಾನ್ಸ್‌ ಕ್ರಿಕೆಟ್ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.ಕೆಎಸ್‌ಸಿಎ ದ್ವಿತೀಯ ಡಿವಿಷನ್ ಮೊದಲ ಗುಂಪಿನಲ್ಲಿ ಆಡಲಿದ್ದಾರೆ.

‘ಬಹಳ ಕಷ್ಟದ ಸಮಯ ಇದಾಗಿತ್ತು. ಪತ್ನಿ, ಕುಟುಂಬ ಮತ್ತು ಆಪ್ತ ಸ್ನೇಹಿತರು ನಾನು ಕುಸಿಯದಂತೆ ನೋಡಿಕೊಂಡರು. ಅವರ ಬೆಂಬಲದಿಂದ ಕಠಿಣ ಸಮಯವನ್ನು ಎದುರಿಸಲು ಸಾಧ್ಯವಾಯಿತು. ಎರಡು ಮೂರು ವರ್ಷಗಳ ಅವಧಿಯಲ್ಲ ರಾಜ್ಯದ ಕೆಲವು ಯುವ ಆಟಗಾರರಿಗೆ ತರಬೇತಿ ನೀಡಲು ಸಮಯ ವಿನಿಯೋಗಿಸಿದೆ. ಅದರಿಂದಾಗಿ ನನ್ನ ಆತ್ಮಸ್ಥೈರ್ಯ ವೃದ್ಧಿಯಾಯಿತು. ಈಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿರುವುದು ಸಂತಸವಾಗಿದೆ’ ಎಂದು ಎಡಗೈ ಸ್ಪಿನ್ನರ್ ಖಾಜಿ ಹೇಳಿದರು.

ADVERTISEMENT

‘ನಡೆದು ಹೋದ ಘಟನೆಯ ಕುರಿತು ಇಲ್ಲಿಯವರೆಗೂ ನನ್ನ ಹಳೆಯ ಸ್ನೇಹಿತರಾಗಲಿ ಮತ್ತು ತಂಡದ ಸಹ ಆಟಗಾರರಾಗಲಿ ಪ್ರಸ್ತಾಪ ಮಾಡಿಲ್ಲ. ಆ ಮೂಲಕ ಅವರು ನನ್ನ ಆತ್ಮವಿಶ್ವಾಸ ವೃದ್ಧಿಯಾಗಲು ಕಾರಣರಾಗಿದ್ದಾರೆ. ತರಬೇತಿ ಪಡೆಯುವ ಮಕ್ಕಳ ಪಾಲಕರು ಕೂಡ ನನ್ನನ್ನು ಪ್ರೋತ್ಸಾಹಿಸಿದ್ದಾರೆ’ ಎಂದು ಖಾಜಿ ಕೃತಜ್ಞತೆ ಸಲ್ಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.