ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕ ತಂಡಕ್ಕೆ ಕರುಣ್ ನಾಯರ್ ನಾಯಕ

ಪವನ್ ದೇಶಪಾಂಡೆ ಉಪನಾಯಕ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 18:46 IST
Last Updated 27 ಡಿಸೆಂಬರ್ 2020, 18:46 IST
ಕರುಣ್ ನಾಯರ್
ಕರುಣ್ ನಾಯರ್   

ಬೆಂಗಳೂರು: ಕರುಣ್ ನಾಯರ್ ಮುಂದಿನ ತಿಂಗಳು ಆಯೋಜನೆಯಾಗಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಲಿದ್ದಾರೆ.

ಆಲ್‌ರೌಂಡರ್ ಪವನ್ ದೇಶಪಾಂಡೆ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಹುಬ್ಬಳ್ಳಿ–ಧಾರವಾಡದ ಪವನ್, ಭಾರತೀಯ ಸ್ಟೇಟ್‌ ಬ್ಯಾಂಕ್ ಮತ್ತು ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಮೊಣಕೈ ಗಾಯದಿಂದಾಗಿ ವಿಶ್ರಾಂತಿ ಪಡೆದಿರುವ ಮನೀಷ್ ಪಾಂಡೆ ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ.

ಭಾನುವಾರ ನಡೆದ ಫಜಲ್ ಖಲೀಲ್ ನೇತೃತ್ವದ ಆಯ್ಕೆ ಸಮಿತಿಯ ಸಭೆಯಲ್ಲಿ 20 ಆಟಗಾರರನ್ನು ಆಯ್ಕೆ ಮಾಡಲಾಯಿತು. ವಿಕೆಟ್‌ಕೀಪರ್ ಕೆ.ಎಲ್. ಶ್ರೀಜಿತ್, ಎಂ.ಬಿ. ದರ್ಶನ್, ಶುಭಾಂಗ್ ಹೆಗಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೋದ ದೇಶಿ ಋತುವಿನಲ್ಲಿ ಮತ್ತು ಈಚೆಗೆ ಐಪಿಎಲ್‌ನಲ್ಲಿ ಮಿಂಚಿದ್ದ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್, ರೋಹನ್ ಕದಂ ಕೂಡ ತಂಡದಲ್ಲಿದ್ಧಾರೆ. ಅನುಭವಿ ಬೌಲರ್ ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್, ಕೆ. ಗೌತಮ್ ಕಣಕ್ಕಿಳಿಯಲಿದ್ದಾರೆ.

ADVERTISEMENT

2018-19 ಮತ್ತು 2019–20ರಲ್ಲಿ ಕರ್ನಾಟಕ ತಂಡವು ಟ್ರೋಫಿ ಗೆದ್ದಿತ್ತು.

’ಕೋವಿಡ್ –19 ಕಾಲಘಟ್ಟದಲ್ಲಿ ಬಿಸಿಸಿಐ ಸೂಚನೆಯಂತೆ 20 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಒಬ್ಬರು ಮ್ಯಾನೇಜರ್ ಮಾತ್ರ ನೇಮಕ ಮಾಡಲಾಗಿದೆ. ಹೋದ ಸಲ ಇಬ್ಬರಿದ್ದರು. ಟೂರ್ನಿಯ ಮಾರ್ಗಸೂಚಿಗಾಗಿ ಎದುರು ನೋಡುತ್ತಿದ್ದೇವೆ‘ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಪ್ರಕಟಿಸಿರುವ ತಂಡ ಇಂತಿದೆ;

ಕರುಣ್ ನಾಯರ್ (ನಾಯಕ), ದೇವದತ್ತ ಪಡಿಕ್ಕಲ್, ರೋಹನ್ ಕದಂ, ಪವನ್ ದೇಶಪಾಂಡೆ (ಉಪನಾಯಕ), ಕೆ.ವಿ.ಸಿದ್ಧಾರ್ಥ, ಕೆ.ಎಲ್. ಶ್ರೀಜಿತ್ ಮತ್ತು ಬಿ.ಆರ್. ಶರತ್ (ಇಬ್ಬರೂ ವಿಕೆಟ್‌ಕೀಪರ್), ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಕೆ. ಗೌತಮ್, ಜೆ. ಸುಚಿತ್, ಪ್ರವೀಣ ದುಬೆ, ಅಭಿಮನ್ಯು ಮಿಥುನ್, ಪ್ರಸಿದ್ಧ ಎಂ. ಕೃಷ್ಣ, ಪ್ರತೀಕ್ ಜೈನ್, ವಿ. ಕೌಶಿಕ್, ರೋನಿತ್ ಮೋರೆ, ಎಂ.ಬಿ. ದರ್ಶನ್, ಮನೋಜ್ ಬಾಂಡಗೆ, ಶುಭಾಂಗ್ ಹೆಗಡೆ

ಯರೇ ಕೆ ಗೌಡ (ಕೋಚ್), ಎಸ್. ಅರವಿಂದ್ (ಬೌಲಿಂಗ್ ಕೋಚ್), ಶಬರೀಶ ಪಿ ಮೋಹನ್ (ಫೀಲ್ಡಿಂಗ್ ಕೋಚ್), ಜಾಬ ಪ್ರಭು (ಫಿಸಿಯೊ), ರಕ್ಷಿತ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಅನುತೋಷ್ ಪಾಲ್ (ಮ್ಯಾನೇಜರ್), ಸಿ.ಎಂ. ಸೋಮಸುಂದರ್ (ಮಜಾಸ್ ಥೆರಪಿಸ್ಟ್), ವಿನೋದ್ (ವಿಡಿಯೊ ಅನಾಲಿಸ್ಟ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.